ರಫೇಲ್ ಹಗರಣ: ಸಂಸತ್ತಿನಲ್ಲಿ ಯಾರು ಏನು ಹೇಳಿದರು?
ನವದೆಹಲಿ, ಜನವರಿ 02: ಸಂಸತ್ತಿನ ಚಳಿಗಾಲದ ಅಧಿವೇಶನ ಕೊನೆಯ ದಿನವಾದ ಇಂದು ಸಂಸತ್ತಿನಲ್ಲಿ ರಫೇಲ್ ಹಗರಣದ್ದೇ ಮಾತು. ಜೊತೆಗೆ ತಮಿಳುನಾಡು ಸಂಸದರ ಮೇಕೆದಾಟು ಗಲಾಟೆ ಸಹ ಸೇರಿಕೊಂಡಿತು.
ಅಧಿವೇಶನದ ಕೊನೆಯ ದಿನ ರಫೇಲ್ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಯಿತು. ಇದರ ಲಾಭ ಪಡೆದ ಕಾಂಗ್ರೆಸ್ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡುವ ವರೆಗೆ ರಫೇಲ್ ಹಗರಣದ ಬಗ್ಗೆ ಎದುರಾಳಿಗಳನ್ನು ಹಣಿದರು. ಆಡಳಿತ ಪಕ್ಷ ಸಹ ತಕ್ಕ ಉತ್ತರವನ್ನೇ ನೀಡಿತು.
ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಎಐಡಿಎಂಕೆ ಸಂಸದರು ಬಾವಿಗಿಳಿದು ಮಾಡಿದ ಪ್ರತಿಭಟನೆ ನಡುವೆಯೂ ರಫೇಲ್ ಹಗರಣದ ಚುಂಗು ಹಿಡಿದು ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಪರಸ್ಪರ ಆರೋಪ, ಟೀಕೆ, ವ್ಯಂಗ್ಯಗಳನ್ನು ಮಾಡಿದವು.
ಸಂಸತ್ನಲ್ಲಿ ರಫೇಲ್ ಹಗರಣದ ಬಗ್ಗೆ ನಡೆದ ಚರ್ಚೆ, ನೀಡಿದ ಉತ್ತರ, ಸಂಸತ್ನಲ್ಲಿ ಇಂದು ನಡೆದ ಪ್ರಮುಖ ಘಟನೆಗಳ ವರದಿ ಇಲ್ಲಿದೆ...
ಧೈರ್ಯ ಇದ್ದರೆ ಜಂಟಿ ಸದನ ಸಮಿತಿ ರಚಿಸಿ
ರಫೆಲ್ ಹಗರಣ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ದ ಕಾಂಗ್ರೆಸ್, ದೊರೆತ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿತು. ರಾಹುಲ್ ಗಾಂಧಿ ಪ್ರಮುಖವಾಗಿ ಮಾತನಾಡಿ, ಮೋದಿ ವಿರುದ್ಧ ಟೀಕಾ ಪ್ರಹಾರವನ್ನೇ ಹರಿಸಿದರು. ಮೋದಿ ಅವರಿಗೆ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಇಲ್ಲ. ಬಿಜೆಪಿಗೆ ಧೈರ್ಯ ಇದ್ದರೆ ರಫೇಲ್ ತನಿಖೆಗೆ ಜಂಟಿ ಸದನ ಸಮಿತಿ ರಚಿಸಿ ಎಂದು ಒತ್ತಾಯಿಸಿದರು.
ಅನಿಲ್ ಅಂಬಾನಿ ಸಹಾಯಕ್ಕಾಗಿ ರಫೇಲ್ ಒಪ್ಪಂದ
ಮೋದಿ ಅವರು ತಮ್ಮ ಗೆಳೆಯ ಎಎ ಅಲಿಯಾಸ್ ಅನಿಲ್ ಅಂಬಾನಿ ಅವರಿಗೆ ಸಹಾಯ ಮಾಡುವ ಕಾರಣಕ್ಕಾಗಿ ನೇರವಾಗಿ ಅವರೇ ಒಪ್ಪಂದವನ್ನು ತಿದ್ದುವಂತೆ ಪ್ರಭಾವ ಬೀರಿದ್ದಾರೆ. ಎಚ್ಎಎಲ್ ನಿಂದ ಒಪ್ಪಂದವನ್ನು ಕಸಿದುಕೊಂಡು ಜೀವನದಲ್ಲೇ ವಿಮಾನ ತಯಾರಿಸದ ಅಂಬಾನಿಗೆ ನೀಡಲಾಗಿದೆ ಎಂದು ಹೇಳಿದರು. ರಫೇಲ್ ಹಗರಣ ಕುರಿತಾದ ಆಡಿಯೋ ಟೇಪ್ ಪ್ರಸಾರ ಮಾಡಲು ಒಪ್ಪಿಗೆ ಸಹ ಕೇಳಿದರು.
ಜಂಟಿ ಸದನ ಸಮಿತಿ ಮಾಡಿ: ಶಿವಸೇನೆ ಆಗ್ರಹ
ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ ಸಹ ರಫೇಲ್ ಹಗರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಇಂದು ಸಂಸತ್ನಲ್ಲಿ ಮಾತನಾಡಿದ ಶಿವಸೇನೆ ಸಂಸದ ಅರವಿಂದ ಸಾವಂತ್, ಭ್ರಷ್ಟಾಚಾರ ಆಗಿಲ್ಲವೆಂದ ಮೇಲೆ ರಫೇಲ್ ಕುರಿತು ಜಂಟಿ ಸದನ ಸಮಿತಿ ಏಕೆ ರಚಿಸಲು ಏಕೆ ಹಿಂಜರಿಯುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕತಾರ್ ಕಡಿಮೆ ವೆಚ್ಚಕ್ಕೆ ವಿಮಾನ ಖರೀದಿಸಿದೆ
ಕತಾರ್ ದೇಶವು ನಮಗಿಂತಲೂ ಬಹು ಕಡಿಮೆ ಮೊತ್ತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ ಎಂದು ಬಿಜು ಜನತಾದಳದ ಸಂಸದ ಕಾಲಿಕೇಶ್ ಸಿಂಗ್ ಹೇಳಿದರು. ಪ್ರಶ್ನೆ ಕೇಳುವ ಅಧಿಕಾರ ಎಲ್ಲರಿಗೂ ಇದೆ, ಹಾಗಾಗಿ ರಫೇಲ್ ಬಗ್ಗೆ ಸಹ ಪ್ರಶ್ನೆ ಕೇಳಲೇಬೇಕಿದೆ ಹಾಗೂ ಅದಕ್ಕೆ ಸರ್ಕಾರ ಉತ್ತರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಉತ್ತರ ನೀಡಿದ ಅರುಣ್ ಜೇಟ್ಲಿ
ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರ ಹೇಳಿದ್ದು ಹಣಕಾಸು ಸಚಿವ ಅರುಣ್ ಜೇಟ್ಲಿ. ರಫೇಲ್ ಹೇಳುತ್ತಿರುವ 1.30 ಲಕ್ಷ ಮೊತ್ತ ಅವರಿಗೆ ದೊರೆತಿದ್ದು ಎಲ್ಲಿಂದ. ಕಾಂಗ್ರೆಸ್ ಪಕ್ಷವು ಎನ್ಡಿಎ ಮೇಲೆ ಆರೋಪ ಹೊರಿಸುವ ಕಾರಣಕ್ಕೆ ರಫೇಲ್ ಹಗರಣವನ್ನು ಸೃಷ್ಠಿ ಮಾಡಿದೆ. ರಾಹುಲ್ ಗಾಂಧಿ ಅವರಿಗೆ ಯುದ್ಧ ವಿಮಾನ ಮತ್ತು ಸಾಮಾನ್ಯ ವಿಮಾನಕ್ಕೂ ವ್ಯತ್ಯಾಸ ಗೊತ್ತಿಲ್ಲ ಎನಿಸುತ್ತದೆ ಎಂದು ವ್ಯಂಗ್ಯವಾಡಿದರು.
ಸಂಸತ್ನಲ್ಲಿ ಪೇಪರ್ ಪ್ಲೇನ್ ಹಾರಿ ಬಿಟ್ಟ ಸಂಸದರು
ಅರುಣ್ ಜೇಟ್ಲಿ ಅವರು ರಫೇಲ್ ಹಗರಣದ ಬಗ್ಗೆ ಉತ್ತರ ನೀಡುವ ವೇಳೆಯಲ್ಲಿ ಕೆಲವು ಸಂಸದರು ಪೇಪರ್ನಲ್ಲಿ ವಿಮಾನಗಳನ್ನು ಮಾಡಿ ಹಾರಿಸಿದರು. ಇದು ಸಭಾಧ್ಯಕ್ಷ ಸುಮಿತ್ರ ಮಹಾಜನ್ ಅವರನ್ನು ಕೆರಳಿಸಿತು. ನೀವೇನು ಮಕ್ಕಳಾ ಎಂದು ಗದರಿಸಿದರು. ಎಐಡಿಎಂಕೆ ಸಂಸದರು ಮೇಕೆದಾಟು ಯೋಜನೆಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು. ಎಐಡಿಎಂಕೆಯ 18 ಸಂಸದರನ್ನು ಸಭಾಧ್ಯಕ್ಷರು ಅಮಾನತು ಮಾಡಿದರು.