ರಾಹುಲ್ ಸುಳ್ಳಿಗೆ ಸುಪ್ರೀಂ ಛೀಮಾರಿ: ಅಮಿತ್ ಶಾ ಲೇವಡಿ
ನವದೆಹಲಿ, ಡಿಸೆಂಬರ್ 14: ರಫೇಲ್ ಡೀಲ್ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಟ್ಟಿದ್ದ ಸುಳ್ಳಿನ ಕಂತೆಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ನವದೆಹಲಿಯಲ್ಲಿ ಶುಕ್ರವಾರ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, 'ನಾವು ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಗೆದ್ದಿದೆ. ಈ ದೇಶದ ಜನರನ್ನು ಹಾದಿತಪ್ಪಿಸಲಾಗುತ್ತಿತ್ತು. ದುರದೃಷ್ಟ ಎಂದರೆ ಆ ಕೆಲಸವನ್ನು ಈ ದೇಶದ ಅತ್ಯಂತ ಹಳೆಯ ಪಕ್ಷವೇ ಮಾಡುತ್ತಿತ್ತು' ಎಂದರು.
ಭಾರತ ಮತ್ತು ಫ್ರಾನ್ಸ್ ಸರ್ಕಾರದ ನಡುವೆ ನಡೆದ ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಅದರ ತನಿಖೆಯಾಗಬೇಕು ಎಂದು ಹಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ನಡೆಸಿತ್ತು. ಆದರೆ ಇಂದು ನೀಡಿದ ತೀರ್ಪಿನಲ್ಲಿ ತನಿಖೆಯನ್ನು ಕೋರಿ ಸಲ್ಲಿಸಿದ್ದ ಎಲ್ಲಾ ಅರ್ಜಿಯನ್ನೂ ವಜಾಗೊಳಿಸಿತ್ತು. ರಫೇಲ್ ಡೀಲ್ ಅನ್ನೇ ಪ್ರಮುಖ ಅಸ್ತ್ರವನ್ನಾಗಿರಿಸಿಕೊಂಡಿದ್ದ ಕಾಂಗ್ರೆಸ್ಸಿಗೆ ಇದು ಬಹುದೊಡ್ಡ ಹಿನ್ನಡೆಯಾದರೆ, ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಇದು ನಿರಾಳತೆಯನ್ನು ಒದಗಿಸಿದೆ.
ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು
ಅಮಿತ್ ಶಾ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು ಇಲ್ಲಿವೆ.
ಕಮಿಷನ್ ಆಸೆ ಇದ್ದಿದ್ದು ಕಾಂಗ್ರೆಸ್ಸಿಗೆ!
'ರಫೇಲ್ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಮೊದಲು ಕಮಿಷನ್ ಗಾಗಿ ಒಪ್ಪಂದವನ್ನು ತಡೆದಿದ್ದು ಕಾಂಗ್ರೆಸ್. ಈ ದೇಶದ ಜನರ ದಾರಿ ತಪ್ಪಿಸಿದ್ದಕ್ಕಾಗಿ ಮತ್ತು ಅನಗತ್ಯವಾಗಿ, ಆಧಾರವಿಲ್ಲದೆ ಅಂಥ ದೊಡ್ಡ ಆರೋಪಗಳನ್ನು ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು' - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ
ಕಾಂಗ್ರೆಸ್ಸಿಗೆ ಸವಾಲು
"ಕಾಂಗ್ರೆಸ್ ಬಳಿ ರಫೇಲ್ ಡೀಲ್ ಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳೂ ಇದ್ದರೆ ಅದು ಸುಪ್ರೀಂ ಕೋರ್ಟಿಗೆ ಅದನ್ನು ಯಾಕೆ ಒಪ್ಪಿಸಲಿಲ್ಲ? ಅವರ ಬಿ ಟೀಂ ಈಗಾಗಲೇ ಅಸ್ತಿತ್ವದಲ್ಲಿದೆ. ಜಂಟಿ ಸಂಸದೀಯ ಸಮಿತಿಯನ್ನು ಸಂಸತ್ತಿನಲ್ಲಿ ಚರ್ಚಿಸಿದ ನಂತರವಷ್ಟೇ ರಚಿಸುತ್ತೇವೆ. ಈ ಕುರಿತ ಚರ್ಚೆಗೆ ನಾವು ಸಿದ್ಧ ಎಂದು ನಾನು ಕಾಂಗ್ರೆಸ್ಸಿಗೆ ಸವಾಲೆಸೆಯುತ್ತೇನೆ"-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಕೇಂದ್ರ ಸರ್ಕಾರದ ಪರ ರಫೇಲ್ ತೀರ್ಪು: ಗಣ್ಯರೇನಂತಾರೆ?
ಸತ್ಯ ಗೆದ್ದಿದೆ
"ಕಾಂಗ್ರೆಸ್ ಅಧ್ಯಕ್ಷರು ಹೊಸದೊಂದು ತಂತ್ರ ಕಂಡುಕೊಂಡಿದ್ದಾರೆ. ಸುಳ್ಳುಗಳನ್ನೇ ಸತ್ಯ ಎಂಬಂತೆ ಹೇಳಿ, ತಮಗೆ ಮತ್ತು ತಮ್ಮ ಪಕ್ಷಕ್ಕೆ ತತ್ ಕ್ಷಣದ ಲಾಭ ಪಡೆಯುವುದು. ಆದರೆ ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅದಕ್ಕೆ ಛೀಮಾರಿ ಹಾಕಿದೆ. ಕೊನೆಗೂ ಗೆದ್ದಿದ್ದು ಸತ್ಯ" -ಅಮಿತ್ ಶಾ,
ರಾಹುಲ್ ಕ್ಷಮೆ ಕೇಳಲಿ
"ನಾವು ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಗೆದ್ದಿದೆ. ಈ ದೇಶದ ಜನರನ್ನು ಹಾದಿತಪ್ಪಿಸುವ ಕೆಲಸವನ್ನು ಈ ದೇಶದ ಅತ್ಯಂತ ಹಳೆಯ ಪಕ್ಷವೇ ಮಾಡುತ್ತಿತ್ತು ಎಂಬುದು ದುರಂತ. ಜನರ ಹಾದಿ ತಪ್ಪಿಸಿದ್ದಕ್ಕೆ ಮತ್ತು ಸೇನೆಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದ್ದಕ್ಕೆ ರಾಹುಲ್ ಗಾಂಧಿಯವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು" -ಅಮಿತ್ ಶಾ, ಬಿಜೆಪಿ ಅಧ್ಯಕ್ಷ