ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ನೀಡಿದರೇ ಸಿಧು?
ನವದೆಹಲಿ, ಜೂನ್ 10: ತಮ್ಮ ವಿವಾದಾತ್ಮಕ ಹೇಳಿಕೆ ಮತ್ತು ನಡೆಗಳ ಮೂಲಕ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದರು.
ಸಿಧು ಅವರನ್ನು ಸಂಪುಟದಿಂದ ಕೈಬಿಡುವ ಅಥವಾ ಖಾತೆ ಬದಲಿಸುವ ಸಂಬಂಧ ಅಮರಿಂದರ್ ಸಿಂಗ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ನಡುವೆ ಸ್ವತಃ ಸಿಧು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕ್ಯಾಪ್ಟನ್ ಅಮರಿಂದರ್ ವಿರುದ್ಧ ತಿರುಗಿಬಿದ್ದಿದ್ದ ನವಜೋತ್ ಸಿಂಗ್ ಸಿಧುಗೆ ಹಿಂಬಡ್ತಿ
ಅಮರಿಂದರ್ ಅವರಲ್ಲಿ ಅಸಮಾಧಾನ ಹುಟ್ಟುಹಾಕಿರುವ ಸಿಧು, ರಾಹುಲ್ ಅವರನ್ನು ಭೇಟಿ ಮಾಡುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಕೆಲವು ಮೂಲಗಳ ಪ್ರಕಾರ ಸಿಧು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರ ಭೇಟಿಯ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಧು ಹೇಳಿದ್ದರು.
ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಂಜಾಬ್ನ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿರುವುದಾಗಿ ಸಿಧು ಟ್ವೀಟ್ ಮಾಡಿದ್ದಾರೆ. 'ರಾಹುಲ್ ಅವರಿಗೆ ನನ್ನ ಪತ್ರವನ್ನು ನೀಡಿದ್ದೇನೆ' ಎಂದೂ ಅವರು ತಿಳಿಸಿದ್ದಾರೆ. ಈ ಭೇಟಿ ವೇಳೆ ಅವರೊಂದಿಗೆ ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಹಿರಿಯ ಮುಖಂಡ ಅಹಮದ್ ಪಟೇಲ್ ಹಾಜರಿದ್ದರು.
ರಾಹುಲ್ ಅವರಿಗೆ ಸಿಧು ನೀಡಿರುವುದು ರಾಜೀನಾಮೆ ಪತ್ರವೇ ಅಥವಾ ಅಮರಿಂದರ್ ವಿರುದ್ಧದ ದೂರಿನ ಪತ್ರವೇ ಎಂಬುದು ಖಚಿತವಾಗಿಲ್ಲ.
ಅಮರೀಂದರ್ ಜೊತೆ ವೈಮನಸ್ಯ, ಸಭೆಗೂ ಹಾಜರಾಗದ ಸಿಧು
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಸಚಿವರಾಗಿದ್ದ ಸಿಧು ಅವರಿಗೆ ಹಿಂಬಡ್ತಿ ನೀಡಿ ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನಗಳ ಸಂಪನ್ಮೂಲ ಸಚಿವ ಸ್ಥಾನವನ್ನು ನೀಡಲಾಗಿದೆ.
ಶುಕ್ರವಾರವೇ ದೆಹಲಿಗೆ ತೆರಳಿದ್ದ ಸಿಧು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ನಿರಂತರವಾಗಿ ಪ್ರಯತ್ನಿಸಿದ್ದರು.