ಪೌರತ್ವ ಕಾಯ್ದೆಗೆ ಪಂಜಾಬ್ ಹಾಗೂ ಕೇರಳ ವಿರೋಧ
ನವದೆಹಲಿ, ಡಿಸೆಂಬರ್ 13: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ದೇಶದ ಜಾತ್ಯತೀತ ತತ್ವಗಳಿಗೆ ಈ ಕಾಯ್ದೆ ಮಾರಕವಾಗಲಿದೆ. ಮುಸ್ಲಿಮರನ್ನು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಕಾಯ್ದೆಯಿಂದ ಮುಸ್ಲಿಮರಿಗೆ ಭಯ ಹುಟ್ಟಲಿದೆ ಹೀಗಾಗಿ ಸಂವಿಧಾನ ವಿರೋಧಿಯಾಗಿರುವ ವಿಧೇಯಕವನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಪಿಣರಾಯಿ ವಿಜಯನ್ ಹಾಗೂ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.
ಈ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ ಅಸಾಧ್ಯ ಎಂದು ಘೋಷಿಸಿರುವ ರಾಜ್ಯಗಳ ಸಂಖ್ಯೆ ಮೂರಕ್ಕೆ ಏರಿದೆ. ಈ ಹಿಂದೆ ಕಾಯ್ದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಗುವ ಮೊದಲೇ ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನ ಅಸಾಧ್ಯ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ
ಆದರೆ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾಗ ಯಾವುದೇ ರಾಜ್ಯಗಳು ಕಾಯ್ದೆಯಿಂದ ಹೊರಗಿರಲು ಸಾಧ್ಯವಿಲ್ಲ ದೇಶಾದ್ಯಂತ ಜಾರಿಗೆ ಬರಲಿದೆ. ಮುಸ್ಲಿಮರಿಗೆ ಕಾಯ್ದೆಯಿಂದ ಅನ್ಯಾಯವಾಗಲಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಎನ್ಆರ್ಸಿ ಮತ್ತು ಕ್ಯಾಬ್ ನಡುವೆ ವ್ಯತ್ಯಾಸ ತಿಳಿಯದೆ ಮಾತನಾಡುತ್ತಿದ್ದಾರೆ.
ದೇಶದ ಯಾವೊಬ್ಬ ಭಾರತೀಯ ಮುಸ್ಲಿಮರಿಗೂ ಸಮಸ್ಯೆಯಾಗುವುದಿಲ್ಲ ಹಾಗೂ ಅವರ ನಾಗರಿಕತ್ವಕ್ಕೆ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ.