ಮೋದಿ ಎದೆಯನ್ನು ಅಳತೆ ಮಾಡಿದವರಾರು?: ಪುಲ್ವಾಮಾ ದಾಳಿ ಬಗ್ಗೆ ದಿಗ್ವಿಜಯ್ ಸಿಂಗ್ ಚಾಟಿ
ನವದೆಹಲಿ, ಫೆಬ್ರವರಿ 23: ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಟೀಕಾ ಪ್ರಹಾರ ನಡೆಸಿದ್ದಾರೆ.
ಭಾರತ-ಸೌದಿ ಅರೇಬಿಯಾ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದೊಂದಿಗಿನ ಮಾತುಕತೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಪುಲ್ವಾಮಾದಲ್ಲಿ 40 ಸೈನಿಕರು ಹುತಾತ್ಮರಾದ ದಾಳಿಯ ಕುರಿತು ಏನೂ ಹೇಳಿಲ್ಲ. ಈ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಳಲಾದ ಅನೇಕ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿಲ್ಲ ಎಂದು ದಿಗ್ವಿಜಯ್ ಕಿಡಿ ಕಾರಿದ್ದಾರೆ.
ಭಯೋತ್ಪಾದನೆಯನ್ನು ಮಟ್ಟಹಾಕುವ ವಿಚಾರದಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮೋದಿ ಅವರದ್ದು 56 ಇಂಚಿನ ಎದೆ ಎಂಬ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.
ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ
'ಮೋದಿ ಅವರ ಎದೆಯನ್ನು ಅಳತೆ ಮಾಡಿದವರು ಯಾರು ಎಂದು ನನಗೆ ಇದುವರೆಗೂ ಅರ್ಥವಾಗಿಲ್ಲ. ಪ್ರಧಾನಿ ಅವರು ಈ ವಿಚಾರವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತೋ ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಶೂಟಿಂಗ್ನಲ್ಲಿ ಬಿಜಿಯಾಗಿದ್ದರು
'ಈ ಘಟನೆ ನಮಗೆ ತಿಳಿದಿರುವಂತೆ ಮಧ್ಯಾಹ್ನ 3.30ರ ವೇಳೆಗೆ ನಡೆದಿದೆ. ಆಗ ಮೋದಿ ಅವರು ಜಿಮ್ ಕಾರ್ಬೆಟ್ ಉದ್ಯಾನದಲ್ಲಿ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದರು. ಅಂತಹ ತುರ್ತು ಸನ್ನಿವೇಶದಲ್ಲಿ ಅವರು ತಮ್ಮ ಎಲ್ಲ ಕೆಲಸಗಳನ್ನು ಮೊಟಕುಗೊಳಿಸಿ ದೆಹಲಿಗೆ ಮರಳಬೇಕಿತ್ತು ಮತ್ತು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಬೇಕಿತ್ತು ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿ ನಡೆದಾಗ ಮೋದಿ ಶೂಟಿಂಗ್ : ಮತ್ತೆ ಕಾಲೆಳೆದ ರಾಹುಲ್
ಕ್ರಮ ತೆಗೆದುಕೊಳ್ಳಲಿಲ್ಲ
ಭದ್ರತೆಗೆ ಸಂಬಂಧಿಸಿದಂತೆ ಸಂಪುಟ ಸಮಿತಿಯ ತುರ್ತು ಸಭೆಯನ್ನು ಕರೆಯಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಅಷ್ಟು ದೊಡ್ಡ ಘಟನೆ ನಡೆಯುವಾಗ, ಜೈಶ್ ಎ ಮೊಹಮ್ಮದ್ ಆತ್ಮಾಹುತಿ ದಾಳಿ ನಡೆಯಲಿದೆ ಎಂದು ಮೊದಲೇ ಘೋಷಿಸಿದ್ದಾಗ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಪುಲ್ವಾಮಾ ದಾಳಿ ರಾಹುಲ್ ಗಾಂಧಿಗೆ ಮುಂಚೆನೇ ತಿಳಿದಿತ್ತೇ: ಬಿಜೆಪಿ ಪ್ರಶ್ನೆ
ಸೌದಿಯಿಂದ ಯಾವ ಒತ್ತಡವಿತ್ತು?
ಇಂದಿನ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯಲಿ ಎಂದು ಯಾರಾದರೂ ಹೇಳಿದರೆ ದೊಡ್ಡ ಗದ್ದಲ ಉಂಟಾಗುತ್ತದೆ. ಆ ವ್ಯಕ್ತಿಯನ್ನು ರಾಷ್ಟ್ರ ವಿರೋಧಿ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಆದರೆ, ಸೌದಿ ಯುವರಾಜ ಭಾರತಕ್ಕೆ ಭೇಟಿ ನೀಡಿದಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯಬೇಕು ಎಂದು ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಪುಲ್ವಾಮಾದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.
ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಸುವ ಕುರಿತು ಒಪ್ಪಂದಕ್ಕೆ ಸಹಿ ಹಾಕಲು ಸೌದಿ ಅರೇಬಿಯಾದಿಂದ ಯಾವ ಒತ್ತಡವಿತ್ತು? ಈ ಎಲ್ಲ ವಿಚಾರಗಳೂ ಈಗ ಹೊರ ಬರುತ್ತಿವೆ ಎಂದಿದ್ದಾರೆ.
ಕಾಂಗ್ರೆಸ್ಸೇ ಹೆಚ್ಚು ಅನುಭವಿಸಿದ್ದು
ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಭಯೋತ್ಪಾದನೆಯಿಂದ ಕಾಂಗ್ರೆಸ್ನಷ್ಟು ಬೇರೆ ಯಾವ ಪಕ್ಷವೂ ಸಂಕಷ್ಟ ಅನುಭವಿಸಿಲ್ಲ. ಇಂದಿರಾಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಭಯೋತ್ಪಾದನೆಯ ಬಲಿಪಶುಗಳಾಗಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಿಯಾಗಿಲ್ಲ ಎಂದಿದ್ದಾರೆ.