ಪುಲ್ವಾಮಾ ದಾಳಿ ಆರೋಪಿಗೆ ಜಾಮೀನು
ನವದೆಹಲಿ, ಫೆಬ್ರವರಿ 27: ಪುಲ್ವಾಮಾ ದಲ್ಲಿ ನಲವತ್ತು ಮಂದಿ ಭಾರತೀಯ ವೀರ ಯೋಧರ ಸಾವಿಗೆ ಕಾರಣರಾದ ಆರೋಪಿಗೆ ಇಂದು ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಇದಕ್ಕೆ ತನಿಖಾ ಸಂಸ್ಥೆಯನ್ನು ಹೊಣೆ ಮಾಡಲಾಗುತ್ತಿದೆ.
Recommended Video
ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಪ್ರಕರಣ ಸಂಬಂಧ ನಿಗದಿತ ಸಮಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಆರೋಪಿಗೆ ದೆಹಲಿ ನ್ಯಾಯಾಲಯ ಮಂಜೂರು ಮಾಡಿದೆ.
ವಿಶೇಷ ಎನ್ಐಎ ನ್ಯಾಯಾಧೀಶ ಪ್ರವೀಣ್ ಸಿಂಗ್ ಪುಲ್ವಾಮಾ ದಾಳಿ ಆರೋಪಿ ಯೂಸಫ್ ಚೋಪನ್ ಗೆ ಜಾಮೀನು ಮಂಜೂರು ಮಾಡಿದ್ದು, ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ವಿಫಲವಾದ ಎನ್ಐಗೆ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, 'ತನಿಖಾ ಸಂಸ್ಥೆಯು ದೋಷಾರೋಪ ಪಟ್ಟಿ ಸಲ್ಲಿಸದೇ ಇನ್ಯಾಯ ಕೆಲಸದಲ್ಲಿ ನಿರತವಾಗಿತ್ತು, ಪುಲ್ವಾಮಾ ದಾಳಿ ಆರೋಪಿ ಜಾಮೀನು ಪಡೆದಿರುವುದು ಪುಲ್ವಾಮಾ ಹುತಾತ್ಮರಿಗೆ ಆಗಿರುವ ಅವಮಾನ' ಎಂದಿದ್ದಾರೆ.
'ಪುಲ್ವಾಮಾ ದಾಳಿ ಬಗ್ಗೆ ಆಗ ಹುಸಿ ಕಣ್ಣೀರು ಸುರಿಸಿದ್ದ ಬಿಜೆಪಿಯು ಪ್ರಕರಣದ ರಾಜಕೀಯ ಲಾಭ ಪಡೆದ ನಂತರದ ನಿರ್ಲಕ್ಷ್ಯ ವಹಿಸಿತು' ಎಂದು ಅವರು ಆರೋಪಿಸಿದ್ದಾರೆ.
ಪುಲ್ವಾಮಾ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಜೊತೆಗೆ ದಾಳಿಕೋರನ ಚಿತ್ರವನ್ನೂ ಬಿಡುಗಡೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಎನ್ಕೌಂಟರ್ನಲ್ಲಿ ಈಗಾಗಲೇ ಕೊಲ್ಲಲಾಗಿದೆ.