ಪಾಕಿಸ್ತಾನಕ್ಕೆ ನೀಡಿದ್ದ 'ಅತಿ ಆಪ್ತ ದೇಶ' ಮಾನ್ಯತೆ ರದ್ದುಗೊಳಿಸಿದ ಭಾರತ
ನವದೆಹಲಿ, ಫೆಬ್ರವರಿ 15: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಘಟನೆಗೆ ಪಾಕಿಸ್ತಾನದ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಅಸ್ತ್ರ ಪ್ರಯೋಗಿಸಲಾಗಿದ್ದು, ಪಾಕ್ಗೆ ನೀಡಲಾಗಿದ್ದ ಅತಿ ಆಪ್ತ ದೇಶ ಎಂಬ ಸ್ಥಾನಮಾನವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಪಾಕಿಸ್ತಾನವು ಭಾರತದಿಂದ ವ್ಯಾಪಾರ ವಹಿವಾಟುಗಳಲ್ಲಿ ಪಡೆದುಕೊಂಡಿದ್ದ ವಿನಾಯಿತಿ ಇನ್ನು ಮುಂದೆ ಅನ್ವಯವಾಗುವುದಿಲ್ಲ.
ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಬಳಿಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.
ಸಭೆಯಲ್ಲಿನ ಎಲ್ಲ ವಿಚಾರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದ ಜೇಟ್ಲಿ, ಶನಿವಾರ ಸರ್ವಪಕ್ಷ ಸದಸ್ಯರ ಸಭೆ ಕರೆದಿರುವುದಾಗಿ ತಿಳಿಸಿದರು.
ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ?
ದಾಳಿಯ ಹಿಂದೆ ಇರುವವರು ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದನೆಗೆ ಬೆಂಬಲ ನೀಡುವವರಿಗೂ ತಕ್ಕ ಶಾಸ್ತಿ ಆಗಲಿದೆ ಎಂದ ಅವರು, ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಗೊಳಿಸುವ ಎಲ್ಲ ಪ್ರಯತ್ನ ಮಾಡಲಾಗುವುದು. ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವಂತೆ ವಿಶ್ವಸಂಸ್ಥೆ ಮೇಲೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.
ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಏನು ಕ್ರಮ ಜರುಗಿಸಲಿದೆ?
ಸ್ವೀಡನ್ ಪ್ರವಾಸದಲ್ಲಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ದಾಳಿ ಘಟನೆಯ ಬೆನ್ನಲ್ಲೇ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಮರಳಿದರು. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದ ಸಚಿವ ಅರುಣ್ ಜೇಟ್ಲಿ, ಶುಕ್ರವಾರ ತಮ್ಮ ಹಣಕಾಸು ಸಚಿವಾಲಯದ ಅಧಿಕಾರವನ್ನು ಮರಳಿ ಪಡೆದುಕೊಂಡರು. ಬಳಿಕ ಸಂಪುಟ ಸಭೆಯಲ್ಲಿ ಭಾಗವಹಿಸಿದರು.