ಆದಷ್ಟೂ ಬೇಗ ಸಾರ್ವಜನಿಕ ಸಾರಿಗೆ ಆರಂಭ: ನಿತಿನ್ ಗಡ್ಕರಿ
ದೆಹಲಿ, ಮೇ 6: ಲಾಕ್ಡೌನ್ ಕಾರಣದಿಂದ ದೇಶಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಗತ್ಯ ಸೇವೆಗಳಿಗೆ ಮಾತ್ರ ಬಸ್, ರೈಲು ಹಾಗೂ ವಿಮಾನಗಳು ಸಂಚರಿಸುತ್ತಿದೆ.
ಸುಮಾರು ಒಂದೂವರೆ ತಿಂಗಳು ನಂತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಆದಷ್ಟೂ ಬೇಗ ಸಾರ್ವಜನಿಕ ಸಾರಿಗೆ ಆರಂಭಿಸುವ ಸಾಧ್ಯತೆ ಇದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೊರೊನಾ ಎಫೆಕ್ಟ್: ಸರ್ಕಾರಿ ಸಾರಿಗೆಗೆ ಉತ್ತಮ ಸ್ಪಂದನೆ ಇಲ್ಲ
ಬಸ್ಗಳು ಮತ್ತು ಕಾರುಗಳ ಮಾಲೀಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ನಿತಿನ್ ಗಡ್ಕರಿ, ಹೆದ್ದಾರಿಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಬಸ್ಸು ಮತ್ತು ಕಾರು ನಿರ್ವಹಿಸುವಾಗ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ಕ್ರಮಗಳ ಬಗ್ಗೆ ಗಮನ ಕೊಡಬೇಕಿದೆ. ಇದೆಲ್ಲವನ್ನು ಯೋಚಿಸಿ ಆದಷ್ಟೂ ಬೇಗ ಸಾರ್ವಜನಿಕ ಸಾರಿಗೆಗೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ.
ಮಾರ್ಚ್ 24ರಿಂದ ಲಾಕ್ಡೌನ್ ಜಾರಿಯಲ್ಲಿದ್ದು ಮೇ 17ಕ್ಕೆ ಮೂರನೇ ಹಂತದ ಲಾಕ್ಡೌನ್ ಮುಗಿಯಲಿದೆ. ಈಗಾಗಲೇ ಸಾರಿಗೆ ಇಲಾಖೆ ಬಹುದೊಡ್ಡ ನಷ್ಟವನ್ನು ಕಂಡಿದೆ. ಕೊರೊನಾ ವೈರಸ್ ಮತ್ತು ದೇಶದ ಆರ್ಥಿಕತೆ ಜೊತೆ ಒಟ್ಟಾಗಿ ಹೋರಾಡಬೇಕಿದೆ. ಹಾಗಾಗಿ, ಪ್ರಧಾನಿ ಮೋದಿ ಮತ್ತು ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಈ ಕುರಿತು ಚರ್ಚಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಸಾರಿಗೆ ಸ್ಥಿತಿಯನ್ನು ಸುಧಾರಿಸಲು ಒಕ್ಕೂಟದ ಸದಸ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. ಬಡ್ಡಿ ಪಾವತಿ ವಿನಾಯಿತಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮರುಪ್ರಾರಂಭಿಸುವುದು, ರಾಜ್ಯ ತೆರಿಗೆಗಳನ್ನು ಮುಂದೂಡುವುದು ಸೇರಿದಂತೆ ಹಲವು ಅಂಶಗಳಿವೆ ಎಂದಿದ್ದಾರೆ.