ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
ನವದೆಹಲಿ, ಜನವರಿ 19: ದೆಹಲಿಯ ಕೆಂಪು ಕೋಟೆ ಬಳಿ ಈಚೆಗೆ ಕಾಗೆಗಳು ಸತ್ತುಬಿದ್ದಿದ್ದು, ಆ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ಇರುವುದು ದೃಢಪಟ್ಟಿದೆ. ಸದ್ಯದಲ್ಲೇ ಗಣರಾಜ್ಯೋತ್ಸವ ದಿನ ಸಮೀಪಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೆಂಪು ಕೋಟೆ ಬಳಿ ಈಚೆಗೆ ಸುಮಾರು 15 ಕಾಗೆಗೆಳು ಸತ್ತುಬಿದ್ದಿದ್ದವು. ಜಲಂಧರ್ ಹಾಗೂ ಭೋಪಾಳ್ ನಲ್ಲಿ ಕಾಗೆಗಳ ಪರೀಕ್ಷೆ ನಡೆಸಿದ್ದು, ಅವುಗಳಲ್ಲಿ ಹಕ್ಕಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ. ಹಕ್ಕಿ ಜ್ವರದ ಆತಂಕ ಎದುರಾಗಿರುವುದರಿಂದ ಜನವರಿ 19ರಿಂದ ಜನವರಿ 26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಿದ ಕೋಳಿ ಮಾಂಸ ಮಾರದಂತೆ ರೆಸ್ಟೊರೆಂಟ್ ಗಳಿಗೆ ದೆಹಲಿ ಪಾಲಿಕೆ ಸೂಚನೆ
ಇದೇ ಸಂದರ್ಭ ದೆಹಲಿಯ ಮೃಗಾಲಯವೊಂದರಲ್ಲಿಯೂ ಬ್ರೌನ್ ಫಿಶ್ ಗೂಬೆ ಸತ್ತು ಬಿದ್ದಿದ್ದು, ಅದರಲ್ಲಿಯೂ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ. ಹೀಗಾಗಿ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಹಾಗೂ ದೆಹಲಿಯ ಇನ್ನಿತರ ಪ್ರದೇಶಗಳಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಘಾಜಿಪುರ ಪೌಲ್ಟ್ರಿ ಮಾರುಕಟ್ಟೆಯಲ್ಲಿ ಕೋಳಿಗಳನ್ನು ಕೊಲ್ಲುವ ಸಂಬಂಧ ಮಂಗಳವಾರ ಮನವಿಯೊಂದನ್ನು ಕೈಗೆತ್ತಿಕೊಂಡ ಹೈಕೋರ್ಟ್, ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಿತು.