ದಿಲ್ಲಿ ಚಲೋ ಎಂದು ಹೊರಟ ರೈತ ಅಪಘಾತದಲ್ಲಿ ಮೃತ
ನವದೆಹಲಿ, ನ. 27: ಕೇಂದ್ರ ಸರ್ಕಾರದ ಹೊರ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರೊಬ್ಬರು ಮೃತಪಟ್ಟಿದ್ದಾರೆ. ಟ್ರಾಲಿಯೊಂದು ರೈತರಿದ್ದ ಟ್ರಾಕ್ಟರ್ ಗೆ ಗುದ್ದಿದ ಪರಿಣಾಮ ಓರ್ವ ರೈತ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಾಯಗಳಾಗಿವೆ.
ದಿಲ್ಲಿ ಚಲೋ ಎಂದು ಹೊರಟ ಪ್ರತಿಭಟನಾಕಾರರನ್ನು ಸಿಂಘು ಗಡಿಯಲ್ಲಿ ತಡೆಯಲಾಗಿದೆ. ಈ ನಡುವೆ ರೋಹ್ಟಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ 45 ವರ್ಷದ ರೈತರೊಬ್ಬರು ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ.
ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ, ದೆಹಲಿ ಗಡಿಯಲ್ಲಿ ಸ್ಥಿತಿ ಉದ್ವಿಗ್ನ
ರೈತನ ಸಾವಿಗೆ ಸರ್ಕಾರವೇ ಕಾರಣ, ಎಲ್ಲೆಡೆ ಸಂಚಾರ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸರ್ಕಾರ ಕಾನೂನು ಮೀರಿ ವರ್ತಿಸುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್(ದಾಕೌಂಡ) ಆರೋಪಿಸಿದೆ.
ಎಪಿಎಂಸಿ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಬೆಲೆ ನೀತಿ, ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ ಮೂಲಕ ಸರ್ಕಾರಗಳು ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸುತ್ತಿವೆ. ಈ ಮೂಲಕ ಕಾರ್ಪೊರೇಟ್, ಎಂಎನ್ಸಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿವೆ ಎಂದು ದೇಶದೆಲ್ಲೆಡೆಯಿಂದ ರೈತ ಸಂಘಟನೆಗಳು ಆರೋಪಿಸಿವೆ.
ಹರ್ಯಾಣದ ರೈತರಿಗೆ ಪಂಜಾಬ್, ಉತ್ತರಪ್ರದೇಶದ ರೈತ ಸಂಘಟನೆಗಳ ಬೆಂಬಲವೂ ದೊರೆಯುತ್ತಿದ್ದು, ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ದೆಹಲಿಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ರೈತರನ್ನು ಬಂಧಿಸಿ ಮೈದಾನಗಳಲ್ಲಿ ಇರಿಸಲು ಪೊಲೀಸರು ಕೇಂದ್ರ ಸರ್ಕಾರದ ಅನುಮತಿ ಕೋರಿದ್ದಾರೆ.