ಮಾತುಕತೆಗೆ ಮುನ್ನವೇ ಬೃಹತ್ ಹೋರಾಟಕ್ಕೆ ಸಿದ್ಧಗೊಳ್ಳುತ್ತಿದೆ ವೇದಿಕೆ
ನವದೆಹಲಿ, ಡಿಸೆಂಬರ್ 29: ಮೂರು ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಡಿ.30ರಂದು ಚರ್ಚೆಗೆ ಕೇಂದ್ರ ಸರ್ಕಾರ ರೈತರನ್ನು ಆಹ್ವಾನಿಸಿದೆ. ಇದರ ಬೆನ್ನಲ್ಲೇ ಮಂಗಳವಾರ ಪ್ರತಿಭಟನಾನಿರತ ರೈತರು ದೆಹಲಿಯ ಸಿಂಘು ಗಡಿಯಲ್ಲಿ ಈ ಹಿಂದಿಗಿಂತಲೂ ನಾಲ್ಕು ಪಟ್ಟು ಹೆಚ್ಚು ದೊಡ್ಡ ವೇದಿಕೆ ನಿರ್ಮಿಸಿದ್ದು, ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಾಳೆ ಸರ್ಕಾರದೊಂದಿಗೆ ಮಾತುಕತೆಯು ವಿಫಲವಾದ ಪಕ್ಷದಲ್ಲಿ, ಈ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳದೇ ಇದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೊಳ್ಳಲು ಈ ವೇದಿಕೆ ರೂಪಿಸಿರುವುದಾಗಿ ರೈತರು ತಿಳಿಸಿದ್ದಾರೆ. ಮುಂದೆ ಓದಿ...
ಆರನೇ ಸುತ್ತಿನ ಚರ್ಚೆ
ಸರ್ಕಾರ ಹಾಗೂ ರೈತರ ನಡುವೆ ಆರನೇ ಸುತ್ತಿನ ಮಾತುಕತೆಗೆ ಡಿ.30ರಂದು ದಿನ ನಿಗದಿಯಾಗಿದೆ. ನಾಳೆ ನಡೆಯಲಿರುವ ಮಾತುಕತೆಯಲ್ಲಿ ತಮ್ಮ ಸಂದೇಶವನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಲು ರೈತರು ನಿರ್ಧರಿಸಿದ್ದಾರೆ. ಒಂದು ವೇಳೆ ಮಾತುಕತೆ ಸಫಲವಾಗದಿದ್ದಲ್ಲಿ, ಈ ಬೃಹತ್ ವೇದಿಕೆಯಲ್ಲಿ ಪ್ರತಿಭಟನೆ ನಡೆಸಲು ರೈತ ಸಂಘಗಳು ನಿರ್ಧರಿಸಿವೆ. ಈ ವೇದಿಕೆಯನ್ನು ಸಂಜೆ ಹೊತ್ತು ಧಾರ್ಮಿಕ ಪ್ರವಚನ ಹಾಗೂ ಸಂಗೀತಕ್ಕೆ ಬಳಸಿಕೊಳ್ಳಲಾಗುವುದು.
ಸರ್ಕಾರ ಅಕ್ಕಿ ಗಿರಣಿಯಲ್ಲ; ಏಕಾಏಕಿ ಯೂಟರ್ನ್ ಹೊಡೆದ ತೆಲಂಗಾಣ ಸಿಎಂ
ಹೋರಾಟಕ್ಕೆ ಸಿದ್ಧತೆ
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಹೆಚ್ಚೆಚ್ಚು ಜನರು ಬರುತ್ತಿದ್ದಾರೆ. ಹೆಚ್ಚಿನ ಜನರಿಗೆ ಈ ಹಿಂದೆ ಇದ್ದ ವೇದಿಕೆ ಸ್ಥಳ ಸೂಕ್ತವಾಗಿರಲಿಲ್ಲ. ಹೀಗಾಗಿ ಬೃಹತ್ ವೇದಿಕೆ ಸಿದ್ಧಪಡಿಸಿದ್ದೇವೆ. ಸರ್ಕಾರ ಕಾಯ್ದೆಗಳನ್ನು ಹಿಂಪಡೆಯದ ಹೊರತು ಪ್ರತಿಭಟನೆ ಮುಂದುವರೆಸುತ್ತೇವೆ. ಅದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಮೂರು ಕಾಯ್ದೆಗಳ ರದ್ದತಿಗೆ ಒತ್ತಾಯ
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆ ಈ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಸರ್ಕಾರಕ್ಕೆ ಡಿ.30ರಂದು ಸ್ಪಷ್ಟವಾಗಿ ತಿಳಿಸಲಾಗುವುದು. ಸರ್ಕಾರ ಒಪ್ಪದ ಪಕ್ಷದಲ್ಲಿ ಈ ಪ್ರತಿಭಟನೆ ಇನ್ನೂ ದೊಡ್ಡ ಮಟ್ಟದಲ್ಲಿ ಮುಂದುವರೆಯುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘದ ಕಾರ್ಯದರ್ಶಿ ಸತ್ನಂ ಸಿಂಗ್ ಸಹ್ನಿ ತಿಳಿಸಿದ್ದಾರೆ.
34ನೇ ದಿನಕ್ಕೆ ಕಾಲಿಟ್ಟ ಹೋರಾಟ
ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ. ಇದುವರೆಗೂ ನಡೆದಿರುವ ಮಾತುಕತೆಗಳು ವಿಫಲವಾಗಿದ್ದು, ಡಿ.30ರಂದು ಆರನೇ ಸುತ್ತಿನ ಮಾತುಕತೆ ನಡೆಯಲಿದೆ. ಸೂಕ್ತ ಪರಿಹಾರದ ಭರವಸೆಯನ್ನೂ ಸರ್ಕಾರ ನೀಡಿದೆ.