ಕಡುಬಿನ ರುಚಿ ತಿಂದಾಗಲೇ ಗೊತ್ತಾಗೋದು: ಮೋದಿಗೆ ಮನಮೋಹನ್ ಸಿಂಗ್ ಟಾಂಗ್
ನವದೆಹಲಿ, ನವೆಂಬರ್ 26: ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನ.26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವ್ಯಂಗ್ಯವಾಡಿದರು.
70ನೇ ಸಂವಿಧಾನ ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಸಂಸದರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನವನ್ನು 'ಪವಿತ್ರ ಗ್ರಂಥ' ಎಂದು ಶ್ಲಾಘಿಸಿದರು. ಮೋದಿ ಅವರ ಹೇಳಿಕೆಗೆ ಬಳಿಕ ಪ್ರತಿಕ್ರಿಯಿಸಿದ ಮನಮೋಹನ್ ಸಿಂಗ್, ಗಾದೆಯೊಂದನ್ನು ಉಲ್ಲೇಖಿಸುವ ಮೂಲಕ ಅವರ ಕಾಲೆಳೆದರು.
ಆರ್ಥಿಕ ಸ್ಥಾಯಿ ಸಮಿತಿಗೆ ಮನಮೋಹನ್ ಸಿಂಗ್ ನಾಮನಿರ್ದೇಶನ
ಯಾವುದಾದರೂ ವಸ್ತುವನ್ನು ಬಳಸುವ ಮೂಲಕವೇ ಅದರ ಒಳಿತು ಕೆಡಕುಗಳನ್ನು ತಿಳಿಯಲು ಸಾಧ್ಯ ಎನ್ನುವ ಮೂಲಕ ಮೋದಿ ಸಂವಿಧಾನವನ್ನು ಓದಲು ಹಾಗೂ ಅದಕ್ಕೆ ಅನುಗುಣವಾಗಿ ಇರಲು ಪ್ರಯತ್ನಿಸಿದ್ದರೆ ಮಾತ್ರ ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡಲು ಯೋಗ್ಯರು ಎಂದು ಪರೋಕ್ಷವಾಗಿ ಹೇಳಿದರು.
ಗಾದೆ ಬಳಸಿ ವ್ಯಂಗ್ಯವಾಡಿದ ಸಿಂಗ್
ಪ್ರಧಾನಿ ಮೋದಿ ಸಂವಿಧಾನವನ್ನು ಹೊಗಳಿದ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, 'ನನ್ನ ಪ್ರಕಾರ ಕಡುಬಿನ ರುಚಿ ಗೊತ್ತಾಗುವುದು ಅದನ್ನು ತಿಂದಾಗಲೇ' ಎಂದು ಇಂಗ್ಲಿಷ್ ಗಾದೆಯೊಂದನ್ನು ಉಲ್ಲೇಖಿಸಿ ಹೇಳಿದರು. 'proof of the pudding is in the eating' ಎಂದು ಸಿಂಗ್ ಹೇಳಿದರು. ಯಾವುದೇ ವಸ್ತು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದನ್ನು ಅದನ್ನು ಬಳಸಲು ಪ್ರಯತ್ನಿಸಿದ ಬಳಿಕವಷ್ಟೇ ತೀರ್ಮಾನಿಸಲು ಸಾಧ್ಯ ಎನ್ನುವುದು ಈ ನುಡಿಗಟ್ಟಿನ ಅರ್ಥ.
ಸಂವಿಧಾನ ಸುರಕ್ಷಿತವಾಗಿಲ್ಲ
'ಮಹಾರಾಷ್ಟ್ರ ರಾಜಕೀಯದ ವಿಚಾರದಲ್ಲಿ ಕೇಂದ್ರ ಸರ್ಕಾರವು ವರ್ತಿಸಿದ ಬಗೆಯು, ಈಗಿನ ಆಡಳಿತ ಪಕ್ಷದ ಕೈಗಳಲ್ಲಿ ಸಂವಿಧಾನದ ನಿಯಮಗಳು ಸುರಕ್ಷಿತವಾಗಿಲ್ಲ ಎಂಬುದನ್ನು ನಿಶ್ಚಿತವಾಗಿಯೂ ತೋರಿಸುತ್ತಿದೆ' ಎಂದು ಮಹಮೋಹನ್ ಸಿಂಗ್, ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದೆ ರಾಷ್ಟ್ರಪತಿ ಆಳ್ವಿಕೆ ಹೇರಿದ್ದು ಮತ್ತು ನಸುಕಿನಲ್ಲಿಯೇ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿದ್ದಕ್ಕೆ ಕೇಂದ್ರದ ವಿರುದ್ಧ ಹರಿಹಾಯ್ದರು.
ನನ್ನನ್ನು ಬೈದಿದ್ದು ಸಾಕು, ನೀವೂ ಐದು ವರ್ಷ ಕಳೆದಾಯ್ತು: ಬಿಜೆಪಿಗೆ ಸಿಂಗ್ ತಿರುಗೇಟು
ಸಂವಿಧಾನ ಪವಿತ್ರ ಗ್ರಂಥ
ಸಂಸತ್ನ ಜಂಟಿ ಅಧಿವೇಶನದಲ್ಲಿ ಸಂವಿಧಾನದ ದಿನದ ಅಂಗವಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತದ ಸಂವಿಧಾನವು ನಮಗೆ ಪವಿತ್ರ ಗ್ರಂಥ ಎಂದಿದ್ದರು. ಈ ಪುಸ್ತಕವು ನಮ್ಮ ಬದುಕು, ನಮ್ಮ ಸಮಾಜ, ನಮ್ಮ ಸಂಪ್ರದಾಯ ಮತ್ತು ನಂಬಿಕೆಗಳನ್ನು ಒಳಗೊಂಡಿದೆ ಮತ್ತು ಹೊಸ ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಮೋದಿ ಹೇಳಿದ್ದರು.
ಸಂಸತ್ ಆವರಣದಲ್ಲಿ ಪ್ರತಿಭಟನೆ
ಸಂಸತ್ನ ಜಂಟಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಬಹಿಷ್ಕರಿಸಿದ್ದ ಕಾಂಗ್ರೆಸ್ ನಾಯಕರು, ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದಲ್ಲಿನ ಬೆಳವಣಿಗೆ ವಿರೋಧಿಸಿದ ಕಾಂಗ್ರೆಸ್ ಸದಸ್ಯರು, 'ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಿಸಿ' ಎಂಬ ಘೋಷಣೆ ಕೂಗಿದರು. ಈ ವೇಳೆ ಸೋನಿಯಾ ಗಾಂಧಿ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.