ಫೋನ್ಗಳಲ್ಲಿ ಪೆಗಾಸಸ್ ಬಳಕೆಯ ಪುರಾವೆ ಲಭ್ಯ!
ನವದೆಹಲಿ, ಜನವರಿ 31: ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪೆಗಾಸಸ್ ಸ್ಪೈವೇರ್ ಬಗ್ಗೆ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಮುಂದೆ ಸೈಬರ್-ಸೆಕ್ಯುರಿಟಿ ಸಂಶೋಧಕರು ಬಹಳ ಗಂಭೀರವಾದ ವಿಚಾರವನ್ನು ಮುಂದಿಟ್ಟಿದ್ದಾರೆ. ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪ ಮಾಡಿರುವ ಅರ್ಜಿದಾರರ ಸಾಧನಗಳಲ್ಲಿ ಪೆಗಾಸಸ್ ಬಳಕೆಯ ಪುರಾವೆ ಲಭ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ನ ಸಮಿತಿಗೆ ಸೈಬರ್ ತಜ್ಞರು ಮಾಹಿತಿ ನೀಡಿದ್ದಾರೆ.
ಈ ಸೈಬರ್-ಸೆಕ್ಯುರಿಟಿ ಸಂಶೋಧಕರು ಕೆಲವು ಅರ್ಜಿದಾರರಿಂದ ಸಂಗ್ರಹ ಮಾಡಿದ ಮಾಹಿತಿಯನ್ನು ಉನ್ನತ ನ್ಯಾಯಾಲಯದ ಸಮಿತಿಯ ಮುಂದೆ ಪ್ರಸ್ತಾಪ ಮಾಡಲು ಆರಂಭ ಮಾಡಿದ್ದಾರೆ. ಇಬ್ಬರು ಸಂಶೋಧಕರಲ್ಲಿ ಒಬ್ಬರು ಏಳು ಜನರ ಐಫೋನ್ಗಳನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿ ಇಬ್ಬರ ಮೊಬೈಲ್ ಫೋನ್ನಲ್ಲಿ ಪೆಗಾಸಸ್ ಬಳಕೆ ಆಗಿರುವುದು ಕಂಡು ಬಂದಿದೆ ಎಂದು ಸಂಶೋಧಕರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಪೆಗಾಸಸ್: ಭಾರತ, ಇಸ್ರೇಲ್ ಶಸ್ತ್ರಾಸ್ತ್ರ ಒಪ್ಪಂದದ ತನಿಖೆಗೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ
ಸಂಶೋಧಕರು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಎರಡು ಫೋನ್ಗಳಲ್ಲಿನ ಪುರಾವೆಗಳನ್ನು ವಿಧಿವಿಜ್ಞಾನದ ಮೂಲಕ ಬಹಿರಂಗಪಡಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಒಂದು ಮೊಬೈಲ್ನಲ್ಲಿ 2018 ರಲ್ಲಿ ಪೆಗಾಸಸ್ ಬಳಕೆ ಮಾಡಿದ್ದರೆ, ಇನ್ನೊಂದು ಮೊಬೈಲ್ನಲ್ಲಿ ಜೂನ್ ಮತ್ತು ಜುಲೈ 2021ರಲ್ಲಿ ಪೆಗಾಸಸ್ ಬಳಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
"ಮಾರ್ಚ್ 2021 ರಲ್ಲಿ ಅನೇಕ ಬಾರಿ ಪೆಗಾಸಸ್ಗಳನ್ನು ಬಳಕೆ ಮಾಡಲಾಗಿದೆ," ಎಂದು ಮೊದಲ ಸೈಬರ್ಸೆಕ್ಯುರಿಟಿ ಸಂಶೋಧಕರು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಆರು ಅರ್ಜಿದಾರರ ಆಂಡ್ರಾಯ್ಡ್ ಫೋನ್ಗಳನ್ನು ವಿಶ್ಲೇಷಿಸಿದ ಇತರ ಸೈಬರ್ಸೆಕ್ಯುರಿಟಿ ಸಂಶೋಧಕರು, ನಾಲ್ಕು ಫೋನ್ಗಳಲ್ಲಿ ಮಾಲ್ವೇರ್ನ ಬೇರೆ ಬೇರೆ ಆವೃತ್ತಿಗಳನ್ನು ಪತ್ತೆ ಹಚ್ಚಿಸಿದ್ದಾರೆ. ಆದರೆ ಉಳಿದ ಎರಡು ಸಾಧನಗಳು ಪೆಗಾಸಸ್ ಅನ್ನು ಹೊಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
"ನಾವು ಪರಿಶೀಲನೆ ಮಾಡಿದಾಗ ಈ ಪೆಗಾಸಸ್ ಮಾಲ್ವೇರ್ ಅನ್ನು ಕಾನೂನುಬದ್ಧ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ತಿಳಿದು ಬಂದಿದೆ. ಇದು ನಿಮ್ಮ ಚಾಟ್ಗಳನ್ನು ಓದುವುದು ಮಾತ್ರವಲ್ಲ, ನಿಮ್ಮ ವೀಡಿಯೊಗಳನ್ನು ಪಡೆಯಬಹುದು, ಯಾವುದೇ ಸಮಯದಲ್ಲಿ ಆಡಿಯೋ ಅಥವಾ ವೀಡಿಯೊವನ್ನು ಮಾಡಿಕೊಳ್ಳಬಹುದು," ಎಂದು ಸೈಬರ್ಸೆಕ್ಯುರಿಟಿ ಸಂಶೋಧಕರು ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನ ಆರಂಭ: ಏನೇನು ಚರ್ಚೆ ನಿರೀಕ್ಷೆಯಿದೆ?
ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ಬಿಸಿ ಸಾಧ್ಯತೆ
ಪೆಗಾಸಸ್ ಸ್ಪೈವೇರ್ ಅನ್ನು ಬಳಸಿಕೊಂಡು ಹಲವಾರು ಮಂದಿಯ ಫೋನ್ಗಳನ್ನು ಟ್ಯಾಪ್ ಮಾಡಲಾಗಿದೆ ಎಂಬ ವಿಚಾರವು ಕಳೆದ ಮುಂಗಾರು ಅಧಿವೇಶನದ ಸಂಧರ್ಭದಲ್ಲಿ ಹಾಗೂ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಬಜೆಟ್ ಅಧಿವೇಶನದವ ಸಂದರ್ಭದಲ್ಲಿ ಇಬ್ಬರ ಮೊಬೈಲ್ ಕದ್ದಾಳಿಕೆ ಮಾಡಲು ಪೆಗಾಸಸ್ ಬಳಕೆ ಮಾಡಲಾಗಿದೆ ಎಂಬುವುದು ತಜ್ಞರು ಪರಿಶೀಲನೆ ನಡೆಸಿ ತಿಳಿಸಿರುವ ಹಿನ್ನೆಲೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಈ ಅಸ್ತ್ರವನ್ನು ಪ್ರಬಲವಾಗಿ ಪ್ರಯೋಗ ಮಾಡಲಿದೆ.
ಪೆಗಾಸಸ್ ಸ್ಪೈವೇರ್ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಮೇಲ್ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಅಕ್ಟೋಬರ್ 27 ರಂದು ಮೂರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. ಮೂರು ಸದಸ್ಯರ ತಾಂತ್ರಿಕ ಸಮಿತಿಯು ಗಾಂಧಿನಗರದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಡಾ ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠದ ಪ್ರಾಧ್ಯಾಪಕರಾದ ಡಾ ಪ್ರಭಾಹರನ್ ಪಿ, ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇನ್ಸ್ಟಿಟ್ಯೂಟ್ ಚೇರ್ ಅಸೋಸಿಯೇಟ್ ಪ್ರೊಫೆಸರ್ ಡಾ ಅಶ್ವಿನ್ ಅನಿಲ್ ಗುಮಾಸ್ತೆರನ್ನು ಒಳಗೊಂಡಿದೆ. (ಒನ್ಇಂಡಿಯಾ ಸುದ್ದಿ)
Recommended Video