ಮಾಧ್ಯಮ ವಿರುದ್ಧ ಪರಿಸರ ಹೋರಾಟಗಾರ್ತಿ ದಿಶಾ ರವಿ ಆಕ್ರೋಶ
ನವದೆಹಲಿ, ಮಾರ್ಚ್.14: ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ಜಾಮೀನು ಪಡೆದ ನಂತರದಲ್ಲಿ ತಮ್ಮ ಮೊದಲ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ರೈತರ ಹೋರಾಟಕ್ಕೆ ಬಂಬಲ ನೀಡಿದ್ದಾರೆ ಎಂಬ ಆರೋಪದ ಮೇಲೆ ಕಳೆದ ಫೆಬ್ರವರಿ.13ರಂದು ಮಧ್ಯರಾತ್ರಿ ಬೆಂಗಳೂರಿನ ನಿವಾಸದಲ್ಲಿ ದಿಶಾ ರವಿ ಅವರನ್ನು ಬಂಧಿಸಲಾಗಿತ್ತು. ಅತ್ಯಲ್ಪ ಮತ್ತು ಹುರುಳಿಲ್ಲದ ಸಾಕ್ಷಿಗಳನ್ನು ಒದಗಿಸಿದ ಪೊಲೀಸರ ವಿರುದ್ಧ ಚಾಟಿ ಬೀಸಿದ ದೆಹಲಿ ಕೋರ್ಟ್, ದಿಶಾ ರವಿ ಅವರಿದೆ 10 ದಿನಗಳ ಹಿಂದೆಯಷ್ಟೇ ಜಾಮೀನು ಮಂಜೂರು ಮಾಡಿತ್ತು.
ದಿಶಾ ರವಿಗೆ ಜಾಮೀನು ನೀಡುವಾಗ ಕೋರ್ಟ್ ಹೇಳಿದ್ದೇನು?
ಟೂಲ್ ಕಿಟ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ಘಟನೆ ಮತ್ತು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯ ವೈಖರಿ ಇದರ ಮಧ್ಯೆ ಮಾಧ್ಯಮಗಳು ತಮ್ಮನ್ನು ಹೇಗೆ ತಪ್ಪಿತಸ್ಥರು ಎಂದು ಘೋಷಿಸಿದವು ಎಂಬುದರ ಬಗ್ಗೆ ದಿಶಾ ರವಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ದಿಶಾ ರವಿ ಅವರ ಹೇಳಿಕೆಗಳಲ್ಲಿ ಉಲ್ಲೇಖವಾಗಿರುವ ಅಂಶಗಳೇನು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಆಲೋಚನೆ ಬದಲಾಯಿಸಿಕೊಳ್ಳಬೇಕಿದೆ ಎಂದ ದಿಶಾ ರವಿ
ಯಾವುದೇ ರೀತಿ ಘಟನೆ ನಡೆದಿಲ್ಲ ಎಂದು ನನ್ನನ್ನು ನಾನೇ ನಂಬಿಸುವುದರ ಮೂಲಕ ಬದುಕುವ ಮಾರ್ಗ ಕಂಡುಕೊಳ್ಳಬೇಕಿದೆ. ಫೆಬ್ರವರಿ.13ರಂದು ರಾತ್ರಿ ಪೊಲೀಸರು ಬೆಂಗಳೂರಿನಲ್ಲಿರುವ ನಮ್ಮ ಮನೆ ಬಾಗಿಲು ತಟ್ಟಲಿಲ್ಲ. ನನ್ನ ಮೊಬೈಲ್ ಲ್ಯಾಪ್ ಟಾಪ್ ವಶಕ್ಕೆ ಪಡೆಯಲಿಲ್ಲ ಹಾಗೂ ನನ್ನನ್ನು ಬಂಧಿಸಲಿಲ್ಲ ಎಂಬ ರೀತಿಯಲ್ಲಿ ನನ್ನನ್ನು ನಾನು ನಂಬಿಸಬೇಕಿದೆ ಎಂದು ದಿಶಾ ರವಿ ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸ್ ಕಸ್ಟಡಿಗೆ ಹೋಗುವ ಮೊದಲು ನಡೆದಿದ್ದೇನು?
ಪೊಲೀಸರು ಬಂಧಿಸಿದ ನಂತರ ನ್ಯಾಯಾಲಯದಲ್ಲಿ ನಡೆದ ಮೊದಲ ವಿಚಾರಣೆಯಲ್ಲಿ ದಿಶಾ ರವಿ ಪರ ವಕೀಲರೇ ಇರಲಿಲ್ಲ ಎಂಬ ಘಟನೆಯನ್ನು ಜ್ಞಾಪಿಸಿಕೊಂಡಿದ್ದಾರೆ. "ಮೊದಲ ದಿನ ಕೋರ್ಟ್ ಹಾಲ್ ನಲ್ಲಿ ನಿಂದಾಗ ನಾನು ನನ್ನ ಪರ ವಕೀಲರಿಗಾಗಿ ಹುಡುಕಾಟ ನಡೆಸಿದ್ದೆ. ಅಂದು ನನ್ನನ್ನು ನಾನು ಸಮರ್ಥಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದೆನು. ಕಾನೂನಿನ ನೆರವು ಪಡೆಯಬಹುದಿತ್ತು ಎಂಬ ಅಂಶವೂ ತಿಳಿದಿರಲಿಲ್ಲ. ಈ ವಿಷಯ ತಿಳಿಯುವುದಕ್ಕೂ ಮೊದಲೇ ನನ್ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿತ್ತು" ಎಂದು ದಿಶಾ ರವಿ ತಿಳಿಸಿದ್ದಾರೆ.
ಟಿಆರ್ ಪಿ ಹುಡುಕಾಟದಲ್ಲಿ ಸುದ್ದಿ ಮಾಧ್ಯಮಗಳು
ಸುದ್ದಿ ಮಾಧ್ಯಮಗಳ ವಿರುದ್ಧ ದಿಶಾ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋರ್ಟ್ ನನ್ನನ್ನು ತಪ್ಪಿತಸ್ಥರು ಎಂದು ತೀರ್ಪು ನೀಡುವುದಕ್ಕೂ ಮೊದಲೇ ಸ್ವಾಯತ್ತತೆಯ ಉಲ್ಲಂಘನೆ ನಡೆದಿತ್ತು. ಟಿವಿ ಚಾನೆಲ್ ಗಳಲ್ಲಿ ನನ್ನ ಫೋಟೋ ಮತ್ತು ನನ್ನ ಕುರಿತು ಸುದ್ದಿಗಳು ಪ್ರಸಾರವಾದವು. ಟಿಆರ್ ಪಿ ಹುಡುಕಾಟದಲ್ಲಿದ್ದ ಸುದ್ದಿ ಮಾಧ್ಯಮಗಳು ಒಂದು ನಿರ್ಧಾರಕ್ಕೆ ಬಂದಿದ್ದವು. ನನ್ನ ಕಾರ್ಯವು ತಪ್ಪು ಎಂದು ಕೋರ್ಟ್ ತೀರ್ಪು ನೀಡುವುದಕ್ಕೂ ಮೊದಲೇ ಟಿವಿ ಚಾನೆಲ್ ಗಳಲ್ಲಿ ಘೋಷಣೆ ಆಗಿ ಬಿಟ್ಟಿತ್ತು ಎಂದು ದಿಶಾ ರವಿ ಆರೋಪಿಸಿದ್ದಾರೆ.
"ಮೂಲಭೂತ ಅಂಶಗಳ ಬಗ್ಗೆ ಯೋಚಿಸುವುದು ಅಪರಾಧವೇ"
ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರು ಜೈಲಿನಲ್ಲಿದ್ದ ಪ್ರತಿ ನಿಮಿಷ, ಪ್ರತಿ ಗಂಟೆಯೂ ಒಂದು ಆಲೋಚನೆಯನ್ನು ಮಾಡುತ್ತಿದ್ದೆನು. ಈ ಜಗತ್ತಿನಲ್ಲಿ ಮೂಲಭೂತ ಅಂಶಗಳನ್ನು ಹೊಂದುವ ಬಗ್ಗೆ ಯೋಚಿಸುವುದೂ ಅಪರಾಧವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ನಮ್ಮ ಹಿರಿಯರು ರೈತರಾದ ಹಿನ್ನೆಲೆ ನಮ್ಮಲ್ಲಿ ಪರಿಸರದಲ್ಲಿ ಕ್ರೀಯಾಶೀಲತೆಯನ್ನು ಪರೋಕ್ಷವಾಗಿ ಹುಟ್ಟು ಹಾಕಿದ್ದಾರೆ. ಸಂಯುಕ್ತ ರಾಷ್ಟ್ರದಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ ಮತ್ತು ಪರಿಸರ ಕಾಳಜಿಯು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
Recommended Video
ಪರಿಸರ ಹೋರಾಟದ ಕುರಿತು ದಿಶಾ ರವಿ ಉಲ್ಲೇಖ
ಪರಿಸರ ಸಂಬಂಧಿತ ನ್ಯಾಯ ಶ್ರೀಮಂತರು ಮತ್ತು ಬಿಳಿಯರಿಗೆ ಮಾತ್ರವಲ್ಲ. ಇದು ಯಾರು ಸ್ಥಳಾಂತರಗೊಂಡಿದ್ದಾರೋ ಅಂಥವರಿಗಾಗಿ ನಡೆದಿರುವ ಹೋರಾಟ. ಯಾರು ಬಳಸುವ ನದಿಗಳು ವಿಷಪೂರಿತವಾಗಿವೆಯೋ ಅವರಿಗಾಗಿ ನಡೆದಿರುವ ಹೋರಾಟ, ಯಾರು ಭೂಮಿ ಕಳೆದುಕೊಂಡಿದ್ದಾರೋ ಅಂಥವರಿಗಾಗಿ ನಡೆದ ಹೋರಾಟ, ಬೇರೆ ಕಾಲದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗಾಗಿ ನಡೆದಿರುವ ಹೋರಾಟ, ಮೂಲಭೂತ ಹಕ್ಕುಗಳಿಗಾಗಿ ಯಾರು ಪರಿತಪಿಸುತ್ತಿದ್ದಾರೋ ಅಂಥವರಿಗಾಗಿ ನಡೆದಿರುವ ಹೋರಾಟ ಎಂದು ದಿಶಾ ರವಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.