ಬಾಲಾಕೋಟ್ ವೈಮಾನಿಕ ದಾಳಿ ಮಾಹಿತಿ ಸೋರಿಕೆ: ವಿಪಕ್ಷಗಳ ಆರೋಪ
ನವದೆಹಲಿ,ಜನವರಿ 17: ಬಾಲಾಕೋಟ್ ವೈಮಾನಿಕ ದಾಳಿ ಮಾಹಿತಿ ಸೋರಿಕೆಯಾಗಿತ್ತು ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
ಹಾಗೆಯೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಅವರು, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಹಾಗೂ ಬಿಎಆರ್ ಸಿ ಯ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸ್ ಆಪ್ ಚಾಟ್ ನಲ್ಲಿ ಬಾಲಾಕೋಟ್ ವೈಮಾನಿಕ ದಾಳಿ ನಡೆಯುವುದಕ್ಕೂ 3 ದಿನಗಳ ಮುನ್ನವೇ ವೈಮಾನಿಕ ದಾಳಿ ಬಗ್ಗೆ ಪ್ರಸ್ತಾಪವಾಗಿರುವುದರ ಬಗ್ಗೆ ತನಿಖೆಯಾಗಬೇಕೆಂದು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಆಗ್ರಹಿಸುತ್ತಿವೆ.
ವಿಪಕ್ಷಗಳು ಇದನ್ನು ಮಹತ್ವದ ಸೇನಾ ಮಾಹಿತಿಯ ಸೋರಿಕೆ ಎಂದು ಆರೋಪಿಸುತ್ತಿದ್ದು ಈ ಕುರಿತು ತನಿಖೆಯಾಗಬೇಕೆಂಬ ಬಗ್ಗೆಯೂ ಆಗ್ರಹಿಸಿವೆ. ವಾಟ್ಸಾಪ್ ಚಾಟ್ ಗಳು ಮುಂಬೈ ಪೊಲೀಸರ ಚಾರ್ಟ್ ಶೀಟ್ ನ ಭಾಗವಾಗಿವೆ.
ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಫೆ.26 ರಂದು ವೈಮಾನಿಕ ದಾಳಿ ನಡೆದಿತ್ತು. ಆದರೆ ಅರ್ನಬ್ ಗೋಸ್ವಾಮಿ ಹಾಗೂ ಪಾರ್ಥೋ ದಾಸ್ ಗುಪ್ತಾ ನಡುವಿನ ಫೆ.23 ರ ವಾಟ್ಸ್ ಆಪ್ ಚಾಟ್ ನಲ್ಲಿ ವೈಮಾನಿಕ ದಾಳಿ ಮಾದರಿಯ ದೊಡ್ಡ ದಾಳಿ ನಡೆಯಬಹುದು ಎಂಬ ಬಗ್ಗೆ ಉಲ್ಲೇಖಿಸಲಾಗಿತ್ತು.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್ ಎಂಬಲ್ಲಿರುವ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜೆಷ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿತ್ತು. ಆದರೆ, ಭಾರತದ ದಾಳಿಯಿಂದ ಯಾರೊಬ್ಬರು ಮೃತಪಟ್ಟಿಲ್ಲ ಎಂದು ಪಾಕಿಸ್ತಾನ ವಾದಿಸಿತ್ತು.