ದೆಹಲಿಯಲ್ಲಿ ರೈತರ ಹೋರಾಟ; ಖಲಿಸ್ತಾನಿ ಪರ ಕೆನಡಾ ಸಂಸದನಿಂದ ವಿಡಿಯೋ
ನವದೆಹಲಿ, ಜನವರಿ 30: ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಖಲಿಸ್ತಾನಿ ಪರ ಹಾಗೂ ಪಾಕಿಸ್ತಾನಿ ಪರ ಹೋರಾಟಗಾರ ಎಂದೇ ಗುರುತಿಸಿಕೊಂಡಿರುವ ಭಾರತೀಯ ಮೂಲದ ಕೆನಡಾ ಸಂಸದ ಜಗಮೀತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕೆನಡಾ ಪ್ರಧಾನಿ ಟ್ರುಡೋ ಅವರಿಗೆ ತಕ್ಷಣವೇ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ತೊಡಗಿಕೊಂಡಿರುವ ರೈತರ ಬಗ್ಗೆ ಮಾತನಾಡಿ ವಿಡಿಯೋ ಹಂಚಿಕೊಂಡಿರುವ ಸಿಖ್ ಸಂಸದ ಜಗಮೀತ್ ಸಿಂಗ್, ಇತಿಹಾಸದಲ್ಲೇ ಈ ಪ್ರತಿಭಟನೆ ರೈತರ ಬೃಹತ್ ಪ್ರತಿಭಟನೆ ಎನಿಸಿಕೊಂಡಿದೆ. ಆದರೆ ರೈತರ ಈ ಶಾಂತಿಯುತ ಹೋರಾಟಕ್ಕೆ ಭಾರತ ಸರ್ಕಾರ ಸ್ಪಂದಿಸುತ್ತಿರುವ ರೀತಿ ಸರಿಯಿಲ್ಲ. ರೈತರಿಗೆ ಹಿಂಸಾಚಾರದ ಪ್ರತಿಕ್ರಿಯೆ ನೀಡುತ್ತಿದೆ. ಭಾರತದ ಈ ನಡೆಯನ್ನು ವಿಶ್ವದ ಹಲವು ನಾಯಕ ಖಂಡಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ರೈತರೇ ಹೋರಾಟದಿಂದ ಒಂದಿಂಚೂ ಹಿಂದೆ ಸರಿಯಬೇಡಿ; ರೈತರಿಗೆ ರಾಹುಲ್ ಸಾಥ್
ರೈತರ ವಿರುದ್ಧ ಸರ್ಕಾರದ ಈ ದೌರ್ಜನ್ಯದ ಕುರಿತು ನನಗೆ ಆತಂಕವಾಗಿದೆ. ರೈತರಿಗೆ ತೊಂದರೆ ನೀಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸಬೇಕು. ರೈತರ ವಿರುದ್ಧ ಈ ಹಿಂಸೆಯನ್ನು ಖಂಡಿಸಬೇಕು ಎಂದು ಪ್ರಧಾನಿ ಜಸ್ಟಿನ್ ಟ್ರೂಡೊ ಅವರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
"ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥ ಪ್ರತಿಭಟನೆ ನಡೆಯುತ್ತಿದೆ. ತಮ್ಮ ಜೀವನಾಧಾರಕ್ಕೆ ತೊಂದರೆಯಾಗುವ ಈ ಕಾಯ್ದೆಗಳ ವಿರುದ್ಧ ರೈತರು ನಿಂತಿದ್ದಾರೆ. ತಮ್ಮ ಹಕ್ಕನ್ನು ಪಡೆದುಕೊಳ್ಳಲು ಶಾಂತಿಯುತವಾಗಿ ಹೋರಾಡುತ್ತಿದ್ದಾರೆ. ಈ ಶಾಂತಿಯುತ ಪ್ರತಿಭಟನೆಯಲ್ಲಿ ಒಗ್ಗಟ್ಟಿನ ಶಕ್ತಿ ಗೋಚರಿಸುತ್ತಿದೆ. ನ್ಯಾಯಕ್ಕಾಗಿ ರೈತರು ಒಗ್ಗಟ್ಟಾಗಿ ನಿಂತಿದ್ದಾರೆ" ಎಂದು ಹೇಳಿದ್ದಾರೆ.
ಭಾರತೀಯ ಮೂಲದ ಕೆನಡಾ ಸಂಸದ ಜಗಮೀತ್ ಸಿಂಗ್ ಗೆ ಖಲಿಸ್ತಾನಿ ಪರ ಪ್ರತಿಭಟನೆ ಆಯೋಜಿಸಿದ ಇತಿಹಾಸವಿದ್ದು, 2013ರಲ್ಲಿ ಒಂಟಾರಿಯೋದಲ್ಲಿ ಹಾಗೂ 2015ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ಖಲಿಸ್ತಾನಿ ಪರ ಮೆರವಣಿಗೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.
ಈ ಪ್ರತಿಭಟನಾ ಮೆರವಣಿಗೆ ಸಂದರ್ಭ ಆಪರೇಷನ್ ಬ್ಲೂ ಸ್ಟಾರ್ ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ಜರ್ನೇಲ್ ಸಿಂಗ್ ಭಿಂದ್ರನ್ವಾಲೆ ಕುರಿತು ಹೊಗಳಿದ್ದಕ್ಕೂ ಜಗಮೀತ್ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. 2016ರಲ್ಲಿ, ಭಾರತದಿಂದ ಸ್ವತಂತ್ರ ಸಿಖ್ ತಾಯ್ನಾಡನ್ನು ಪಡೆದುಕೊಳ್ಳಲು ಹಿಂಸಾಚಾರವನ್ನೇ ಪ್ರತಿರೋಧವಾಗಿ ಬಳಸಬಹುದು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾರತೀಯ ಗುಪ್ತಚರ ಸಂಸ್ಥೆಗಳು 2012ರಿಂದಲೂ ಜಗಮೀತ್ ಸಿಂಗ್ ಮೇಲೆ ಕಣ್ಣಿಟ್ಟಿದೆ.