ಮಧ್ಯರಾತ್ರಿ ಹೊತ್ತಿ ಉರಿದ ದೇಶದ ರಾಜಧಾನಿ; ಕಿಚ್ಚು ಹಬ್ಬಿದ ವೃತ್ತಾಂತ
ನವದೆಹಲಿ, ಫೆಬ್ರವರಿ.25: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿದ್ದ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಸಿಎಎ ಪರ ಮತ್ತು ಸಿಎಎ ವಿರೋಧಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ ಇದುವರೆಗೂ ಒಬ್ಬ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ದೆಹಲಿಯ ಈಶಾನ್ಯ ಭಾಗದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಡಿಸಿಪಿ ಶಹ್ ದರಾ ಅಮಿತ್ ಶರ್ಮಾ ಸೇರಿ 10 ಮಂದಿ ಪೊಲೀಸರು ಹಾಗೂ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ದೆಹಲಿಯಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸೇರಿ ಐವರು ಸಾವು
ಜಫ್ರಾಬಾದ್, ಮೌಜ್ ಪುರ್, ಚಾಂದ್ ಬಾಗ್, ಖುರೇಜಿ ಖಾಸ್ ಮತ್ತು ಭಜನ್ ಪುರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಉದ್ರಿಕ್ತರ ಮೇಲೆ ಲಾಠಿಪ್ರಹಾರ ನಡೆಸಿದ್ದು, ಅಶ್ರುವಾಯು ಸಿಡಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಸಿಎಎ ಪರ ವಿರೋಧದ ಕಿಚ್ಚಿಗೆ ರಾಷ್ಟ್ರ ರಾಜಧಾನಿ ಹೊತ್ತಿ ಉರಿದಿದ್ದು ಹೇಗೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಜಾಫ್ರಾಬಾದ್ ನಲ್ಲಿ ನೆರೆದ ಮಹಿಳಾ ಹೋರಾಟಗಾರರು
- ಫೆಬ್ರವರಿ.22, ರಾತ್ರಿ - 10:30 ಗಂಟೆ,
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ 500ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನಾಕಾರರು ದೆಹಲಿ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದರು. ಇದರಿಂದ ಶನಿವಾರ ರಾತ್ರಿಯಿಂದಲೇ ಇಲ್ಲಿನ ಮೆಟ್ರೋ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಬಂದ್ ಮಾಡಲಾಗಿತ್ತು.
ರಸ್ತೆ ಸಂಚಾರಕ್ಕೆ ಅಡ್ಡಿಪಡಿಸದಂತೆ ಹೋರಾಟಗಾರರಿಗೆ ಖಾಕಿ ಮನವಿ
- ಫೆಬ್ರವರಿ.23, ಬೆಳಗ್ಗೆ - 09 ಗಂಟೆ,
ಚಾಂದ್ ಬಾಗ್ ನಿಂದ ರಾಜಘಾಟ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೊರಟ ಪ್ರತಿಭಟನಾಕಾರರು ಜಾಫ್ರಾಬಾದ್ ಬಳಿ ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿ ರಾಜಘಾಟ್ ವರೆಗೂ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಲು ಆಗುವುದಿಲ್ಲ. ಸಂಚಾರಕ್ಕೆ ಅಡ್ಡಿಪಡಿಸದೆ ಸ್ಥಳ ತೆರವುಗೊಳಿಸುವಂತೆ ಮನವಿ ಮಾಡಿಕೊಂಡರು.
ಸಿಎಎ ಪ್ರತಿಭಟನೆ: ನೀವು ದೆಹಲಿಯಲ್ಲಿದ್ದರೆ ಈ ರಸ್ತೆಗಳಲ್ಲಿ ಸಂಚರಿಸಬೇಡಿ
ಹೋರಾಟಗಾರರಿಗೆ ಬೆಂಬಲ ಸೂಚಿಸಿದ ಶಾಸಕ ಕಪಿಲ್ ಮಿಶ್ರಾ
- ಫೆಬ್ರವರಿ.23, ಮಧ್ಯಾಹ್ನ - 12 ಗಂಟೆ
ಜಾಫ್ರಾಬಾದ್ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಕರವಾಲ ನಗರ ಕ್ಷೇತ್ರದ ಆಪ್ ಶಾಸಕ ಕಪಿಲ್ ಮಿಶ್ರಾ ತಮ್ಮ ಬೆಂಬಲಿಗರಿಗೂ ಕರೆ ನೀಡಿದರು.
- ಫೆಬ್ರವರಿ.23, ಮಧ್ಯಾಹ್ನ - 3.30-4 ಗಂಟೆ
ಜಾಫ್ರಾಬಾದ್ ನಲ್ಲಿ ನೆರೆದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕಪಿಲ್ ಮಿಶ್ರಾ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದರು. ಪೊಲೀಸರು ಸ್ಥಳ ತೆರವಿಗೆ ಸೂಚನೆ ನೀಡಿದ್ದು, ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದರು.
ಮೌಜ್ ಪುರ್ ನಲ್ಲಿ ಪ್ರತಿಭಟನಾಕರರ ನಡುವೆ ಕಲ್ಲುತೂರಾಟ
- ಫೆಬ್ರವರಿ.23, ಮಧ್ಯಾಹ್ನ - 3.45-4 ಗಂಟೆ
ದೆಹಲಿ ಈಶಾನ್ಯ ಭಾಗದ ಬಾಬರ್ ಪುರ್ ನಿಂದ ಹೊರಟ ಪ್ರತಿಭಟನಾಕಾರರು ಮೌಜ್ ಪುರ್ ಬಳಿ ಆಗಮಿಸುತ್ತಿದ್ದಂತೆ ಇತ್ತ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಹೋರಾಟ ನಡೆಸುತ್ತಿದ್ದ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟಿದೆ. ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದೆ.
- ಫೆಬ್ರವರಿ.23, ಸಂಜೆ - 4-5 ಗಂಟೆ
ದೆಹಲಿಯ ಮೌಜ್ ಪುರ್, ಕರವಾಲ ನಗರ್, ಮೌಜ್ ಪುರ್ ಚೌಕ್, ಬಾಬರ್ ಪುರ್, ಮತ್ತು ಚಾಂದ್ ಬಾಗ್ ನಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿದರು. ಸ್ಥಳದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್
- ಫೆಬ್ರವರಿ.23, ರಾತ್ರಿ 9-11 ಗಂಟೆ
ಕರವಾಲ ನಗರ್, ಚಾಂದ್ ಬಾಗ್, ಬಾಬರ್ ಪುರ್ ಮತ್ತು ಮೌಜ್ ಪುರ್ ನಲ್ಲಿ ಮತ್ತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಕಲ್ಲುತೂರಾಟದಲ್ಲಿ ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಯಿತು.
ಮರುದಿನವೂ ಮುಂದುವರಿದ ಹಿಂಸಾಚಾರ
- ಫೆಬ್ರವರಿ.24, ಬೆಳಗ್ಗೆ 10 ಗಂಟೆ
ದೆಹಲಿಯ ಜಫ್ರಾಬಾದ್ ನಲ್ಲಿ ಸೋಮವಾರವೂ ಪ್ರತಿಭಟನೆ ತೀವ್ರಗೊಂಡಿತು. ಸಿಎಎ ಪರ ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರು ಪರ ಮತ್ತು ವಿರೋಧ ಘೋಷಣೆಗಳನ್ನು ಕೂಗಿದರು. ಜಾಫ್ರಾಬಾದ್ ನಲ್ಲಿ ನಡೆಸುತ್ತಿರುವ ಸಿಎಎ ವಿರೋಧಿ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
- ಫೆಬ್ರವರಿ.24, ಮಧ್ಯಾಹ್ನ 12.30-1 ಗಂಟೆ
ದೆಹಲಿಯ ಕರ್ದಾಮ್ ಪುರಿ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಭಾರಿ ಕಲ್ಲುತೂರಾಟ ನಡೆಯಿತು.
- ಫೆಬ್ರವರಿ.24, ಮಧ್ಯಾಹ್ನ 12-1.30 ಗಂಟೆ
ಬಾಬರ್ ಪುರ್ ನಲ್ಲೂ ಕಲ್ಲುತೂರಾಟ ನಡೆದಿದ್ದು, ಮುಖಕ್ಕೆ ವಸ್ತ್ರ ಸುತ್ತಿಕೊಂಡ ಉದ್ರಿಕ್ತರ ಗುಂಪು ಪೊಲೀಸರ ಜೊತೆಗೆ ಘರ್ಷಣೆಗೆ ಇಳಿಯಿತು. ಕರವಾಲ ನಗರ್, ಶೇರ್ಪುರ್ ಚೌಕ್ ಮತ್ತು ಗೋಕುಲ್ ಪುರಿಯಲ್ಲೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದರು.
ವಾಹನಗಳಿಗೆ ಬೆಂಕಿಯಿಟ್ಟ ಉದ್ರಿಕ್ತರ ಗುಂಪು
- ಫೆಬ್ರವರಿ.24, ಮಧ್ಯಾಹ್ನ 2.30-3.30 ಗಂಟೆ
ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದು, ಮನೆಗಳ ಮೇಲೂ ಕಲ್ಲುತೂರಾಟ ನಡೆಸಿತು. ಪೆಟ್ರೋಲ್ ಬಂಕ್ ಗೂ ಬೆಂಕಿ ಇಟ್ಟಿದ್ದು, ಕಲ್ಲುತೂರಾಟದಲ್ಲಿ ಗಾಯಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಮೃತಪಟ್ಟರು. ಡಿಸಿಪಿಯೊಬ್ಬರು ಕಲ್ಲುತೂರಾಟದಿಂದ ಗಾಯಗೊಂಡರು.
- ಫೆಬ್ರವರಿ.24, ಸಂಜೆ 3.50-6 ಗಂಟೆ
ಕರ್ದಾಪುರ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಭಾರಿ ಕಲ್ಲುತೂರಾಟ ನಡೆಯಿತು.
- ಫೆಬ್ರವರಿ.24, ರಾತ್ರಿ 7.30-8 ಗಂಟೆ
ದೆಹಲಿ ಗೋಕುಲ್ ಪುರಿಯ ಟೈರ್ ಮಾರ್ಕೆಟ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದೇ ಪ್ರದೇಶದಲ್ಲಿ ಇರುವ ಶಾಲಾ-ಕಾಲೇಜುಗಳಿಗೂ ಹಾನಿಯಾಯಿತು.
- ಫೆಬ್ರವರಿ.24, ರಾತ್ರಿ 10 ಗಂಟೆ
ದೆಹಲಿಯ ಗೋಂದಾ ಚೌಕ್ ಮತ್ತು ಮೌಜ್ ಪುರ್ ಚೌಕ್ ನಲ್ಲಿ ಹಿಂಸಾಚಾರ ಮುಂದುವರಿಯಿತು. ಹಲವೆಡೆ ಉದ್ರಿಕ್ತರು ವಾಹನಗಳಿಗೆ ಹಚ್ಚಿದ ಬೆಂಕಿ ನಂದಿಸಲು 10ಕ್ಕೂ ಹೆಚ್ಚು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದರು.