ಸಿಎಎ ವಿರುದ್ಧ ವಿದ್ಯಾರ್ಥಿಗಳೊಡನೆ ಪ್ರತಿಭಟನೆಗೆ ಕೂತ ಪ್ರಿಯಾಂಕಾ ಗಾಂಧಿ
ನವದೆಹಲಿ, ಡಿಸೆಂಬರ್ 20: ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ದೆಹಲಿಯ ಇಂಡಿಯಾ ಗೇಟ್ ಬಳಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿಯಾದರು.
ಈ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, 'ಎನ್ಆರ್ಸಿ ಯು ಬಡತನ ವಿರೋಧಿಯಾಗಿದೆ ಎಂದರು.
ನವದೆಹಲಿ ಹಿಂಸಾಚಾರ: ಪೊಲೀಸರ ವಾಹನಕ್ಕೆ ಬೆಂಕಿ
ನೋಟ್ ಬ್ಯಾನ್ ಮಾಡಿ ಹೇಗೆ ಇಡೀಯ ದೇಶವನ್ನು ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದರೋ ಹಾಗೆಯೇ ಎನ್ಆರ್ಸಿ ಮಾಡಿ ಇಡೀ ದೇಶವೇ ಸರತಿ ಸಾಲಿನಲ್ಲಿ ನಿಲ್ಲುವಂತೆ ಮೋದಿ ಮಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
'ಎನ್ಆರ್ಸಿ ಯು ಬಡವರ ವಿರೋಧಿ ಯೋಜನೆ, ಇದು ಬಡವರನ್ನು ಹೆಚ್ಚಿಗೆ ಬಾಧಿಸುತ್ತದೆ' ಎಂದರು. 'ಜಮೀನಿನ ಹಳೆಯ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದರೆ ಎಲ್ಲರೂ ಹಾಗೆ ಮಾಡಬಲ್ಲರೇ?, ಶ್ರೀಮಂತರು ತಮ್ಮ ಪಾಸ್ಪೋರ್ಟ್ ತೋರಿಸುತ್ತಾರೆ ಆದರೆ ಬಡವರು ಏನು ಮಾಡುತ್ತಾರೆ? ಎಂದು ಅವರು ಪ್ರಶ್ನೆ ಮಾಡಿದರು.
ಭಾರತದ ನಾಗರೀಕತೆಯನ್ನು ಸಾಬೀತುಪಡಿಸಲು ಮೊದಲ ಬಾರಿಗೆ ಧರ್ಮವನ್ನು ಮಾನದಂಡವಾಗಿ ಬಳಸಲಾಗಿದೆ ಎಂದು ಸಿಎಎ ಬಗ್ಗೆ ಪ್ರಿಯಾಂಕಾ ಗಾಂಧಿ ಟೀಕಿಸಿದರು.
ಸಿಎಎ ಪ್ರತಿಭಟನೆ ದೆಹಲಿಯಲ್ಲಿ ತೀವ್ರಗೊಂಡಿದ್ದು, ಮಧ್ಯಾಹ್ನದ ವರೆಗೆ ಶಾಂತಿಯುತವಾಗಿ ನಡೆದ ಪ್ರತಿಭಟನೆ ಸಂಜೆ ಮೇಲೆ ಹಿಂಸಾಚಾರಕ್ಕೆ ತಿರುಗಿತು. ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶಗಳಲ್ಲಿ ಈ ವರೆಗೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ.