ಸಂಸತ್ ಅಧಿವೇಶನದ ವೇಳೆ ಬೃಹತ್ ಹೋರಾಟಕ್ಕೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್!
ನವದೆಹಲಿ, ನವೆಂಬರ್ 23: ಭಾರತದಲ್ಲಿ ಇಂಧನ ಬೆಲೆ ಏರಿಕೆ, ಹಣದುಬ್ಬರವನ್ನು ಖಂಡಿಸಿ ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಬೃಹತ್ ಮೆರವಣಿಗೆ ನಡೆಸುವುದಕ್ಕೆ ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ. 2019ರ ನಂತರದಲ್ಲಿ ಮೊದಲ ಬಾರಿ ಪರಿಣಾಮಕಾರಿ ಹೋರಾಟಕ್ಕಾಗಿ ಕಾಂಗ್ರೆಸ್ ಮೆಗಾ ರ್ಯಾಲಿ ನಡೆಸಲು ಮುಂದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಆಗುತ್ತಿರುವ ಹಣದುಬ್ಬರದ ವಿರುದ್ಧ ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಎರಡು ವಾರಗಳ ಜನ ಜಾಗರಣ ಅಭಿಯಾನವನ್ನು ಈ ಕಾಂಗ್ರೆಸ್ ರ್ಯಾಲಿ ಮುಕ್ತಾಯಗೊಳಿಸಲಿದೆ. ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರ್ಯಾಲಿಯನ್ನು ಯೋಜಿಸಲು ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು, ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್, ಪಕ್ಷದ ನಾಯಕ ಸಚಿನ್ ಪೈಲಟ್ ಸೇರಿದಂತೆ ಇತರರು ಕಾಂಗ್ರೆಸ್ ಸಭೆಯಲ್ಲಿ ಉಪಸ್ಥಿತರಿದ್ದರು.
ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿ:
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸುವುದಕ್ಕೆ ಕಾಂಗ್ರೆಸ್ ಸಲ್ಲಿಸಿರುವ ಮನವಿಗೆ ಕೇಂದ್ರದಿಂದ ಇನ್ನೂ ಅನುಮತಿ ನೀಡಿಲ್ಲ. ಒಂದು ವೇಳೆ ಅನುಮತಿ ಸಿಗದಿದ್ದರೆ ದ್ವಾರಕಾ ಮೈದಾನಕ್ಕೆ ತೆರಳಿ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಯೋಜನೆ ರೂಪಿಸಿಕೊಂಡಿದೆ.
ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ:
ಕಳೆದ 19 ದಿನಗಳಿಂದ ದೇಶದಲ್ಲಿ ಇಂಧನ ಬೆಲೆ ಯಾವುದೇ ರೀತಿ ವ್ಯತ್ಯಾಸವಾಗಿಲ್ಲ. ಮಂಗಳವಾರವೂ ಇಂಧನ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ಈ ತಿಂಗಳ ಆರಂಭದಲ್ಲಿ, ದೀಪಾವಳಿಯ ಮುನ್ನಾ ದಿನ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತು. ಇದರಿಂದಾಗಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದ ಇಂಧನ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಈ ಬೆಲೆಗಳಲ್ಲಿ ಇಳಿಕೆಯ ಹೊರತಾಗಿಯೂ, ದೇಶದ ನಾಲ್ಕು ಮಹಾನಗರಗಳು ಮತ್ತು ಹಲವಾರು ನಗರಗಳಲ್ಲಿ ಪೆಟ್ರೋಲ್ ದರವು ಇಂದಿಗೂ ಪ್ರತಿ ಲೀಟರ್ಗೆ 100 ರೂಪಾಯಿಗಿಂತ ಹೆಚ್ಚಾಗಿದೆ.
ನವೆಂಬರ್ 29ರಿಂದ ಚಳಿಗಾಲ ಅಧಿವೇಶನ:
ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಿಂದ ಆರಂಭವಾಗಲಿದ್ದು, ಡಿಸೆಂಬರ್ 23ರಂದು ಕೊನೆಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಪಿಎ) ಸಭೆ ಈಗಾಗಲೇ ನಿರ್ಧರಿಸಿದೆ. ಹಿಂದಿನ ಅಧಿವೇಶನದಂತೆ ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಸದನಗಳು ಕೋವಿಡ್ -19 ಮಾರ್ಗಸೂಚಿಗಳಿಗೆ ಅನುಗುಣವಾಗಿ ಏಕಕಾಲದಲ್ಲಿ ನಡೆಯಲಿದೆ. ಉಭಯ ಸದನಗಳ ಸದಸ್ಯರು ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸುವ ನಿರೀಕ್ಷೆಯಿದೆ. ಪ್ರತಿ ಸದನದಲ್ಲಿ ಸುಮಾರು 20 ಸಭೆಗಳು ನಡೆಯಲಿವೆ. ಈ ವರ್ಷದ ಸಾಮಾನ್ಯ ಬಜೆಟ್ನಲ್ಲಿ ಘೋಷಿಸಲಾದ ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣಕ್ಕೆ ಅನುಕೂಲವಾಗುವಂತೆ ಸರ್ಕಾರವು ಮಸೂದೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ.
ಚಳಿಗಾಲ ಅಧಿವೇಶನದ ಪ್ರಮುಖ ವಿಷಯಗಳು:
ಕೃಷಿ ಕಾಯ್ದೆಗಳ ರದ್ದು ಮಸೂದೆ, ಇಂಧನ ಬೆಲೆ ಏರಿಕೆ, ಹಣದುಬ್ಬರ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ, ಲಖಿಂಪುರ ಖೇರಿ ಘಟನೆಯ ವಿಷಯದ ಬಗ್ಗೆ ಪ್ರತಿಪಕ್ಷಗಳು ಪ್ರಶ್ನಿಸುವುದಕ್ಕೆ ಪ್ರತಿಪಕ್ಷಗಳು ಅಣಿಯಾಗಿವೆ. ಆ ಮೂಲಕ ಅಧಿವೇಶನದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. ಇದರ ಮಧ್ಯೆ ವಿವಾದಿತ ಮೂರು ಕೃಷಿ ಕಾನೂನುಗಳ ರದ್ದುಗೊಳಿಸುವುದಾಗಿ ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ, ಈ ಸಂಬಂಧ ಮಸೂದೆಗೆ ಚಳಿಗಾಲ ಅಧಿವೇಶನದಲ್ಲೇ ಅಂಗೀಕಾರ ಪಡೆಯುವುದಾಗಿ ಹೇಳಿದೆ. ಇನ್ನೊಂದು ದಿಕ್ಕಿನಲ್ಲಿ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ, ಖಾದ್ಯ ತೈಲಗಳ ಬೆಲೆ ಏರಿಕೆ, ಕಾಶ್ಮೀರದಲ್ಲಿ ಜನ ಸಾಮಾನ್ಯರ ಮೇಲೆ ಉಗ್ರರ ದಾಳಿ ಸೇರಿದಂತೆ ಇತ್ತೀಚಿನ ಹಲವು ವಿಷಯಗಳ ಮೇಲೆ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.