'ನನಗೂ ಮಗಳಿದ್ದಾಳೆ': ಅತ್ಯಾಚಾರ ಘಟನೆಗೆ ಪ್ರಿಯಾಂಕಾ ಗಾಂಧಿ ಖಂಡನೆ
ನವದೆಹಲಿ, ಅಕ್ಟೋಬರ್ 1: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ 19 ವರ್ಷದ ದಲಿತ ಯುವತಿ ಮೇಲಿನ ಸಾಮೂಹಿತ ಅತ್ಯಾಚಾರ ಮತ್ತು ಕೊಲೆ ಘಟನೆ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆ ಬಗ್ಗೆ ಭಾರತದ ಪ್ರತಿ ಮಹಿಳೆಯೂ ಕೋಪಗೊಳ್ಳಬೇಕಿದೆ ಎಂದಿರುವ ಪ್ರಿಯಾಂಕಾ, ಉತ್ತರ ಪ್ರದೇಶ ಸರ್ಕಾರ ನಡೆದುಕೊಂಡಿರುವ ರೀತಿಗೆ ಕಿಡಿಕಾರಿದ್ದಾರೆ. ಸಂತ್ರಸ್ತೆಯ ಕುಟುಂಬವನ್ನು ಪೊಲೀಸರು ನಡೆಸಿಕೊಂಡಿರುವ ಬಗೆ ಒಪ್ಪುವಂತಹದ್ದಲ್ಲ ಎಂದು ಖಂಡಿಸಿದ್ದಾರೆ.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮರಣೋತ್ತರ ವರದಿಯಲ್ಲಿ ಸತ್ಯ ಬಹಿರಂಗ
'ನನಗೂ 18 ವರ್ಷದ ಹೆಣ್ಣುಮಗಳಿದ್ದಾಳೆ. ಉತ್ತರ ಪ್ರದೇಶ ಸರ್ಕಾರವು ಸಂತ್ರಸ್ತೆಯ ಕುಟುಂಬವನ್ನು ನಡೆಸಿಕೊಂಡಿರುವ ರೀತಿ ಒಪ್ಪುವಂತಹದ್ದಲ್ಲ. ನನಗೆ ಕೋಪ ಬಂದಿದೆ. ದೇಶದ ಪ್ರತಿ ಮಹಿಳೆಗೂ ಕೋಪ ಬರಬೇಕಿದೆ' ಎಂದು ಪ್ರಿಯಾಂಕಾ ಹೇಳಿದ್ದಾರೆ.
ಹತ್ರಾಸ್ನಲ್ಲಿರುವ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರೆ ಕಾಂಗ್ರೆಸ್ ಮುಖಂಡರಿಗೆ ಪೊಲೀಸರು ತಡೆಯೊಡ್ಡಿದ್ದಾರೆ.
ಹತ್ರಾಸ್ನಲ್ಲಿ ಸಿಆರ್ಪಿಸಿ ಸೆಕ್ಷನ್ 144 ಜಾರಿ ಮಾಡಿದ್ದು, ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ ವೇನಲ್ಲಿಯೇ ಕಾಂಗ್ರೆಸ್ ನಾಯಕರನ್ನು ತಡೆಯಲಾಗಿದೆ.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮನೆಗೆ ಸೋನಿಯಾ,ರಾಹುಲ್ ಭೇಟಿ: ಸೆಕ್ಷನ್ 144 ಜಾರಿ
'ನಾವು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲೇಬೇಕು. ವಾಹನಕ್ಕೆ ತಡೆಯೊಡ್ಡಿದರೂ ನಾವು ನಡೆದುಕೊಂಡೇ ಅಲ್ಲಿಗೆ ತೆರಳಲು ಸಿದ್ಧ. ಅದಕ್ಕೆ ಎರಡು ಮೂರು ದಿನ ಬೇಕಾದರೂ ತೊಂದರೆಯಿಲ್ಲ' ಎಂದು ಪ್ರಿಯಾಂಕಾ ಹೇಳಿದ್ದಾರೆ.