ದೆಹಲಿ ಹಿಂಸಾಚಾರ: ಪರೀಕ್ಷೆಗಳು ಮುಂದಕ್ಕೆ, ಶಾಲಾ-ಕಾಲೇಜುಗಳಿಗೆ ರಜೆ
ನವದೆಹಲಿ, ಫೆಬ್ರವರಿ 27: ಈಶಾನ್ಯ ದೆಹಲಿ ಹಿಂಸಾಚಾರ ಸಿಬಿಎಸ್ಇ ಪರೀಕ್ಷೆಗಳ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು ಫೆ 27 ರಂದು ನಿಗದಿಯಾಗಿದ್ದ ಸಿಬಿಎಸ್ಇ 12ನೇ ತರಗತಿಯ ಇಂಗ್ಲಿಷ್ ಪರೀಕ್ಷೆಗಳನ್ನು ದೆಹಲಿಯ 80 ಕೇಂದ್ರಗಳಲ್ಲಿ ಮುಂದೂಡಲಾಗಿದೆ.
ದೆಹಲಿ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಮುಂದೂಡಿ ಆದೇಶಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು ಹೇಳಿಕೆ ನೀಡಿದ್ದಾರೆ. ಗಲಭೆ ಪೀಡಿತ ಪ್ರದೇಶದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೆಹಲಿ ಹಿಂಸಾಚಾರದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ ಎಷ್ಟು?
ಕಳೆದ ಮೂರು ದಿನಗಳಿಂದಲೂ ಈಶಾನ್ಯ ದೆಹಲಿ ಹಾಗೂ ಪೂರ್ವ ದೆಹಲಿಯ ಕೆಲವು ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಂಬಂಧ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಆದ ಕಾರಣ ಫೆ 26 ರ ಪರೀಕ್ಷೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅದನ್ನು ಮುಂದೂಡಿತ್ತು.
ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಫೆ 27ರಂದು ನಡೆಯಬೇಕಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಈಶಾನ್ಯ ದೆಹಲಿಯ 73 ಹಾಗೂ ಪೂರ್ವ ದೆಹಲಿಯ 7 ಕೇಂದ್ರಗಳಲ್ಲಿ ಮುಂದೂಡಲಾಗಿದೆ.ದೆಹಲಿಯ ನಾಲ್ಕು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಇದೇ ವೇಳೆ ಹಿಂಸಾಚಾರ ತಡೆಗಟ್ಟಲು 12 ಪ್ಯಾರ ಮಿಲಿಟರಿ ಪಡೆ ನಿಯೋಜನೆ ಮಾಡಲಾಗುತ್ತಿದೆ.
ಇನ್ನು ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಪರ-ವಿರೋಧಿ ಗುಂಪುಗಳ ನಡುವಿನ ಘರ್ಷಣೆಯಿಂದ ದೆಹಲಿಯಲ್ಲಿ ಹಿಂಸಾಚಾರ ಹೆಚ್ಚುತ್ತಲ್ಲೇ ಇದೆ.
ಶಾಲಾ, ಕಾಲೇಜುಗಳಲ್ಲಿ ಮುಷ್ಕರ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಈ ಬೆನ್ನಲ್ಲೇ ಎಚ್ಚೆತ್ತ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ. ಈ ಆದೇಶ ಈಶಾನ್ಯ ದೆಹಲಿಯ ಹಲವೆಡೆ ಜಾರಿಯಲ್ಲಿದ್ದು, ಹಿಂಸಾಚಾರ ತಡೆಗಟ್ಟಲು ಕಠಿಣ ಆದೇಶ ಹೊರಡಿಸಲಾಗಿದೆ.