ಮಂತ್ರಿಮಂಡಲ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಡಿಸೆಂಬರ್ 21: ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಇದೇ ಮೊದಲ ಬಾರಿಗೆ ತಮ್ಮ ಮಂತ್ರಿಮಂಡಲದ ಪರಾಮರ್ಶೆ ಸಭೆಯನ್ನು ಇಂದು ನಡೆಸಿದರು.
ನವದೆಹಲಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಗರ್ವಿ ಗುಜರಾತ್ ಭವನದಲ್ಲಿ ಈ ವಿಶೇಷ ಮಂತ್ರಿಮಂಡಲ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ, ಸಾಮಾಜಿಕ ವಲಯಗಳ ಬಗ್ಗೆ ಚರ್ಚೆ ನಡೆದಿರುವುದಾಗಿ ತಿಳಿದು ಬಂದಿದೆ. ದೇಶದ ತುಂಬ ಎದ್ದಿರುವ ಪೌರತ್ವ ಕಾನೂನು ವಿರೋಧದ ಪ್ರತಿಭಟನೆ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿದ್ದು, ಈ ಮಹತ್ವದ ಸಭೆಯಲ್ಲಿ ಸಚಿವಾಲಯಗಳ ಕಾರ್ಯವೈಖರಿಯ ಪ್ರಗತಿ ಬಗ್ಗೆ ಮಹತ್ವದ ನಿರ್ಧಾರಗಳನ್ನು ಪ್ರಧಾನಿಯವರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮುಂದಿನ ತಿಂಗಳು ಕೇಂದ್ರ ಸಂಪುಟ ವಿಸ್ತರಣೆ ಇರುವುದರಿಂದ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸಚಿವರ ಜೊತೆ ಬಿಜೆಪಿಯ ಕೆಲ ಹಿರಿಯ ನಾಯಕರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚಿವರ ಪರಾಮರ್ಶೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ನಡೆಯುವ ಚರ್ಚೆ ಮಹತ್ವ ಪಡೆದುಕೊಂಡಿತ್ತು. ಪ್ರತಿ ತಿಂಗಳು 24 ನೇ ತಾರಿಖಿನಂದು ಸಚಿವ ಸಂಪುಟ ಸಭೆ ನಡೆಯುವುದು ರೂಡಿ. ಆದರೆ, ಮೋದಿಯವರು ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಿದರು.