ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾದ ಕೇಜ್ರಿವಾಲ್ : ಪ್ರಧಾನಿ ಮೋದಿಗೆ ಕೈಮುಗಿದು ಮನವಿ
ನವದೆಹಲಿ, ಏಪ್ರಿಲ್ 23: ಕೊರೊನಾ ಎರಡನೇ ಅಲೆ ದೇಶದಲ್ಲಿ ಕೈಮೀರಿ ಹೋಗುತ್ತಿರುವ ಸಂದರ್ಭದಲ್ಲಿ, ದೆಹಲಿಯಲ್ಲಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯ ಬಗ್ಗೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನಮಿಡಿಯುವಂತೆ ಮನವಿ ಮಾಡಿದ್ದಾರೆ.
ಕೊರೊನಾ ವಿಪರೀತವಾಗಿ ಹರಡುತ್ತಿರುವ ದೆಹಲಿ ಸೇರಿದಂತೆ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ, ವರ್ಚುಯಲ್ ಸಭೆಯನ್ನು ಪ್ರಧಾನಿ ಮೋದಿ ಕರೆದಿದ್ದರು. ಈ ಸಭೆಯಲ್ಲಿ ಮಾತನಾಡುತ್ತಿರುವ ವೇಳೆ ಒಂದು ಹಂತದಲ್ಲಿ ಕೇಜ್ರಿವಾಲ್ ಭಾವೋದ್ವೇಗಕ್ಕೆ ಒಳಗಾದರು.
ಆಕ್ಸಿಜನ್ ಕೊರತೆಯಿಂದ ಗಂಗಾರಾಮ್ ಆಸ್ಪತ್ರೆಯಲ್ಲಿ 25 ಕೋವಿಡ್ ರೋಗಿಗಳ ಸಾವು
"ಅತ್ಯಂತ ಸೂಕ್ತ ಸಂದರ್ಭದಲ್ಲಿ ನೀವು ಈ ಸಭೆಯನ್ನು ಕರೆದಿದ್ದೀರಾ, ನಮಗೆ ನಿಮ್ಮ ಮಾರ್ಗದರ್ಶನ ಬೇಕಿದೆ. ದೆಹಲಿಯ ಪರಿಸ್ಥಿತಿಯನ್ನು ನೋಡಿ, ನನಗೆ ನಿದ್ದೆ ಬರುತ್ತಿಲ್ಲ. ಒಂದೊಂದು ಸಾವು ನನ್ನನ್ನು ಕಾಡುತ್ತಿದೆ"ಎಂದು ಕೇಜ್ರಿವಾಲ್ ಹೇಳಿದರು. ಪ್ರಧಾನಿ ಜೊತೆಗಿನ ಸಿಎಂ ಆಂತರಿಕ ಸಭೆಯನ್ನು ಕೇಜ್ರಿವಾಲ್ ಲೈವ್ ಟೆಲಿಕಾಸ್ಟ್ ಮಾಡುವ ಮೂಲಕ ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದರು. ಪ್ರಧಾನಿ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದಾಗ, ಕೇಜ್ರಿವಾಲ್ ಸಭೆಯಲ್ಲೇ ಕ್ಷಮೆಯಾಚಿಸಿದರು.
"ದೆಹಲಿಯಲ್ಲಿ ಆಕ್ಸಿಜನ್ ತಯಾರಿಸುವ ಘಟಕ ಇಲ್ಲ ಎಂದ ಮಾತ್ರಕ್ಕೆ ದೆಹಲಿಯವರಿಗೆ ಇದು ತಡವಾಗಿ ಸಿಗಬೇಕು ಎಂದೇನಿಲ್ಲ. ಎರಡು ಕೋಟಿ ದೆಹಲಿ ನಿವಾಸಿಗಳು ನಿಮ್ಮ ಸಹಾಯ ಹಸ್ತಕ್ಕೆ ಕಾಯುತ್ತಿದ್ದಾರೆ. ಇದು ಮುಖ್ಯಮಂತ್ರಿಯಾಗಿ ನಾನು ನಿಮಗೆ ಮಾಡುತ್ತಿರುವ ವಿನಮ್ರ ಮನವಿ"ಎಂದು ಕೇಜ್ರಿವಾಲ್ ಹೇಳಿದರು. ಮುಂದೆ ಓದಿ..
ದೆಹಲಿಯಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿದೆ: ಅರವಿಂದ್ ಕೇಜ್ರಿವಾಲ್
ದೆಹಲಿಗೆ ಏಳು ನೂರು ಟನ್ ಆಕ್ಸಿಜನ್ ಅವಶ್ಯಕತೆಯಿದೆ
"ಒಂದು ಎಸ್ಟಿಮೇಶನ್ ಪ್ರಕಾರ ದೆಹಲಿಗೆ ಏಳು ನೂರು ಟನ್ ಆಕ್ಸಿಜನ್ ಅವಶ್ಯಕತೆಯಿದೆ. ಕೇಂದ್ರ ಸರಕಾರ ದೆಹಲಿಯ ಕೋಟಾವನ್ನು 480 ಟನ್ ಗೆ ನಿಗದಿ ಪಡಿಸಿದೆ. ನಾನು ಇದಕ್ಕಾಗಿ ಆಭಾರಿಯಾಗಿದ್ದೇನೆ. ಆದರೆ, ಕಳೆದ 24 ಗಂಟೆಯಲ್ಲಿ 350 ಟನ್ ಮಾತ್ರ ದೆಹಲಿಗೆ ಬಂದಿದೆ. ಮಿಕ್ಕ ಆಕ್ಸಿಜನ್ ಹೊತ್ತು ತರುತ್ತಿರುವ ಟ್ರಕ್ ಗಳನ್ನು ಹೆದ್ದಾರಿಯಲ್ಲಿ ತಡೆಹಿಡಿಯಲಾಗಿದೆ ಎನ್ನುವ ಮಾಹಿತಿಯಿದೆ. ನೀವು, ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿ ನನ್ನ ಪ್ರಾರ್ಥನೆ"ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸಭೆಯಲ್ಲಿ ಕೇಜ್ರಿವಾಲ್ ಮನವಿ
ಆಕ್ಸಿಜನ್ ಸಮಸ್ಯೆ ಆರಂಭ ಆದಾಗಿನಿಂದ ನನ್ನ ಫೋನ್ ಹೊಡೆದುಕೊಳ್ಳುತ್ತಲೇ ಇರುತ್ತದೆ. ವಿವಿಧ ಆಸ್ಪತ್ರೆಗಳಿಂದ ಫೋನ್ ಬರುತ್ತೆ, ಕೆಲವೇ ಗಂಟೆಗಳಿಗೆ ಬೇಕಾಗುವಷ್ಟು ಮಾತ್ರ ಆಕ್ಸಿಜನ್ ಉಳಿದಿದೆ ಎಂದು. ನಾವು ಕೇಂದ್ರದ ಕೆಲವು ಸಚಿವರ ಜೊತೆ ಮಾತಾನಾಡಿದಾಗ ಆರಂಭದಲ್ಲಿ ಸೂಕ್ತ ರೀತಿಯಲ್ಲೇ ಸ್ಪಂದಿಸುತ್ತಾರೆ. ಬರಬರುತ್ತಾ, ಅವರಿಂದಲೂ ಸರಿಯಾದ ಮಾಹಿತಿ ಸಿಗುವುದಿಲ್ಲ. ನಾವು ಇಂತಹ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿ"ಎಂದು ಕೇಜ್ರಿವಾಲ್ ಸಭೆಯಲ್ಲಿ ಮನವಿ ಮಾಡಿದ್ದಾರೆ.
ಒಬ್ಬೊಬ್ಬರ ಜೀವವೂ ನಮಗೆ ಬಹಳ ಮುಖ್ಯ
ಒಬ್ಬೊಬ್ಬರ ಜೀವವೂ ನಮಗೆ ಬಹಳ ಮುಖ್ಯ ಎನ್ನುವ ವಿಶ್ವಾಸವನ್ನು ನಾವು ಜನರಿಗೆ ನೀಡಬೇಕಿದೆ. ತುರ್ತಾಗಿ ನಾವು ಕಾರ್ಯ ನಿರ್ವಹಿಸಬೇಕಿದೆ. ನಮಗೆ ನಿಮ್ಮ ಮಾರ್ಗದರ್ಶನ ಬೇಕಿದೆ. ನನ್ನ ರಾಜ್ಯದ ಜನರ ಮುಖ್ಯಮಂತ್ರಿಯಾಗಿ ನಾನು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ದೆಹಲಿಗೆ ಆಕ್ಸಿಜನ್ ಹೊತ್ತು ತರುತ್ತಿದ್ದ ಟ್ರಕ್ ಅನ್ನು ನಿಲ್ಲಿಸಿದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೀವು ದೂರವಾಣಿ ಕರೆ ಮಾಡಿ, ನಮಗೆ ಸಹಾಯ ಮಾಡಿ"ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ದೇಶದ ಎಲ್ಲಾ ಕಡೆ ಒಂದೇ ಬೆಲೆ ಲಸಿಕೆಗೆ ನಿಗದಿಯಾಗಲಿ
ದೇಶದ ಆಕ್ಸಿಜನ್ ತಯಾರಿಸುವ ಕಾರ್ಖಾನೆಗಳನ್ನು ಕೇಂದ್ರ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಆಕ್ಸಿಜನ್ ತರಲು ಏರ್ ಅಂಬುಲೆನ್ಸ್ ಬಳಕೆ ಮಾಡಬೇಕು ಎನ್ನುವುದು ನನ್ನ ಮನವಿ. ಲಸಿಕೆಗಳ ಬೆಲೆ ಎಲ್ಲಾ ಕಡೆಯೂ ಒಂದೇ ಇರಬೇಕು ಎನ್ನುವುದು ನಮ್ಮ ಸಲಹೆ. ನಾವೆಲ್ಲಾ ಒಂದೇ ದೇಶಿಗರು, ಹಾಗಾಗಿ ದೇಶದ ಎಲ್ಲಾ ಕಡೆ ಒಂದೇ ಬೆಲೆ ಲಸಿಕೆಗೆ ನಿಗದಿಯಾಗಲಿ"ಎಂದು ಸಭೆಯಲ್ಲಿ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.