ಕರ್ನಾಟಕದಲ್ಲಿ ಸಿಎಂ ಬದಲಾವಣೆ ಹಿಂದೆ 'ಪೆಗಾಸಸ್' ತಂತ್ರಾಂಶ!
ನವದೆಹಲಿ, ಜುಲೈ 22: ಪೆಗಾಸಸ್ ತಂತ್ರಾಂಶವನ್ನು ಇಸ್ರೇಲ್ ಬೇಹುಗಾರಿಕೆಯ ಆಯುಧದಂತೆ ಬಳಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಮಾತ್ರ ಈ ಆಯುಧವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. "ಒಂದು ದೇಶದ ವಿರುದ್ಧ ಹುನ್ನಾರ ನಡೆಸುವ ಮತ್ತು ಆಂತರಿಕ ಭದ್ರತೆಗೆ ಆತಂಕಕಾರಿ ಆಗಿರುವ ಭಯೋತ್ಪಾದಕರು ಹಾಗೂ ಉಗ್ರರ ವಿರುದ್ಧ ಈ ಪೆಗಾಸಸ್ ಬೇಹುಗಾರಿಕೆಯ ಶಸ್ತ್ರಾಸ್ತ್ರವನ್ನು ಬಳಸಬೇಕು," ಎಂದರು.
ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಮೇಲೂ 'ಪೆಗಾಸಸ್ ಕಣ್ಣು'!
ದೇಶದ ಭದ್ರತೆಗೆ ಉಪಯೋಗವಾಗಬೇಕಿರುವ ಪೆಗಾಸಸ್ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳ ವಿರುದ್ಧ ಬಳಸಿಕೊಳ್ಳುತ್ತಿವೆ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ಕರ್ನಾಟಕ ರಾಜಕಾರಣದ ಮೇಲೆ ಕಣ್ಣಿಡಲು ಪೆಗಾಸಸ್?
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಷಯ ತೀವ್ರ ಚರ್ಚೆಯಾಗುತ್ತಿದೆ. ಇದರ ಮಧ್ಯೆ "ಪೆಗಾಸಸ್ ತಂತ್ರಾಂಶವನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಬದಲಾವಣೆಗೂ ಮೊದಲು ಅಲ್ಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಇದೇ ಪೆಗಾಸಸ್ ಬಳಸಿಕೊಳ್ಳಲಾಗಿದೆ," ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೇಶದ್ರೋಹ ಎಂಬುದನ್ನು ಬಿಟ್ಟು ಬೇರೆ ಪದವಿಲ್ಲ
ಪೆಗಾಸಸ್ ಬೇಹುಗಾರಿಕೆಯ ತಂತ್ರಾಂಶವನ್ನು ಸುಪ್ರೀಂಕೋರ್ಟ್ ಮೇಲೆಯೂ ಬಳಕೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ದೇಶದ ಎಲ್ಲ ಪ್ರಮುಖ ಸಂಸ್ಥೆಗಳ ವಿರುದ್ಧ ಈ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಇರುವ ಏಕೈಕ ಪದ ಎಂದರೆ ಅದು ದೇಶದ್ರೋಹವಾಗುತ್ತದೆ. ಈ ಕಾರ್ಯವನ್ನು ಹೇಳುವ ಮತ್ತೊಂದು ಪದವಿಲ್ಲ," ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹ
"ಇಸ್ರೇಲಿನ ಪೆಗಾಸಸ್ ತಂತ್ರಾಂಶವನ್ನು ಬೇಹುಗಾರಿಕೆಗೆ ದುರುಪಯೋಗ ಮಾಡಿಕೊಂಡಿರುವ ದೇಶದ್ರೋಹದ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು," ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಭಾರತದ ನೂರಾರು ಗಣ್ಯರ ಮೇಲೆ ಪೆಗಾಸಸ್ ಕಣ್ಣು
ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ದೇಶದ ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ ಎಂದ ಆರೋಪವಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.