ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿಯಿಂದ ಮೊದಲ ದೇಣಿಗೆ
ನವದೆಹಲಿ, ಜನವರಿ 15: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ದೇಣಿಗೆ ಅಭಿಯಾನ ಶುಕ್ರವಾರ ಆರಂಭಗೊಂಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಅಭಿಯಾನವನ್ನು ಜನವರಿ 15ರಿಂದ ಆರಂಭಿಸಿದ್ದು, ಮೊದಲು ರಾಷ್ಟ್ರಪತಿಗಳಿಂದ ದೇಣಿಗೆ ಪಡೆದಿದ್ದಾರೆ.
ಹಿಂದೂ ಕುಟುಂಬಗಳಿಂದ ಮಾತ್ರ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ
"ರಾಷ್ಟ್ರಪತಿಗಳು ಈ ದೇಶದ ಮೊದಲ ನಾಗರಿಕರು. ಹೀಗಾಗಿ ಅಭಿಯಾನಕ್ಕೆ ಚಾಲನೆ ನೀಡಲು ಅವರ ಬಳಿ ಕೇಳಿಕೊಂಡೆವು. 5,01,000 ರೂಪಾಯಿ ದೇಣಿಗೆ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು" ಎಂದು ಟ್ರಸ್ಟ್ ನ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇದೇ ಸಂದರ್ಭ ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹದ ಬೃಹತ್ ಅಭಿಯಾನ ಫೆಬ್ರುವರಿ 27ರವರೆಗೂ ಮುಂದುವರೆಯಲಿದೆ.
ದೇಶದ ಪುರಾತನ ಕಟ್ಟಡ ನಿರ್ಮಾಣ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಿರುಗಾಳಿ, ಭೂಕಂಪ ಹಾಗೂ ಇನ್ನಿತರ ನೈಸರ್ಗಿಕ ವಿಕೋಪಗಳಿಗೂ ಜಗ್ಗದಂತೆ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.