ಆಸ್ಪತ್ರೆಯಿಂದ ರಾಷ್ಟ್ರಪತಿ ಭವನಕ್ಕೆ ಮರಳಿದ ರಾಮನಾಥ್ ಕೋವಿಂದ್
ನವದೆಹಲಿ, ಏಪ್ರಿಲ್ 12: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಮಾರು ಎರಡು ವಾರಗಳ ಆಸ್ಪತ್ರೆ ವಾಸದ ಬಳಿಕ ಸೋಮವಾರ ರಾಷ್ಟ್ರಪತಿ ಭವನಕ್ಕೆ ಹಿಂದಿರುಗಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
'ನನ್ನ ಶಸ್ತ್ರಚಿಕಿತ್ಸೆ ಬಳಿಕ ನಾನು ರಾಷ್ಟ್ರಪತಿ ಭವನಕ್ಕೆ ಮರಳಿದ್ದೇನೆ. ನಿಮ್ಮೆಲ್ಲರ ಹಾರೈಕೆ ಮತ್ತು ಪ್ರಾರ್ಥನೆಗಳು, ಏಮ್ಸ್ ಹಾಗೂ ಸೇನೆಯ ಆರ್ಆರ್ ಆಸ್ಪತ್ರೆಯ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ನೀಡಿದ ಅತೀವ ಕಾಳಜಿಯಿಂದ ನನ್ನ ತ್ವರಿತ ಚೇತರಿಕೆ ಸಾಧ್ಯವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮನೆಗೆ ಮರಳಲು ಸಂತೋಷವಾಗುತ್ತಿದೆ' ಎಂದು ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಐಸಿಯುದಿಂದ ವಿಶೇಷ ಕೊಠಡಿಗೆ ವರ್ಗಾವಣೆ
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 30ರಂದು ಕೋವಿಂದ್ ಅವರಿಗೆ ಹೃದಯದ ಬೈಪಾಸ್ ಸರ್ಜರಿ ನಡೆಸಲಾಗಿತ್ತು. ಏಪ್ರಿಲ್ 3ರಂದು ಅವರನ್ನು ಐಸಿಯುದಿಂದ ವಿಶೇಷ ಕೊಠಡಿಗೆ ರವಾನಿಸಲಾಗಿತ್ತು.
ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 26ರಂದು ಕೋವಿಂದ್ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಹೃದಯದಲ್ಲಿ ಸಮಸ್ಯೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಮರುದಿನ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
'ಬೈಪಾಸ್ ಸರ್ಜರಿ ಬಳಿಕ ನಾನು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರು ಹಾಗೂ ಆರೈಕೆದಾರರ ಅಮೋಘ ಬದ್ಧತೆಗೆ ಧನ್ಯವಾದಗಳು. ಶೀಘ್ರವೇ ಚೇತರಿಸಿಕೊಳ್ಳುವಮತೆ ನಾಗರಿಕರು, ಭಾರತದ ಹಾಗು ವಿದೇಶದ ನಾಯಕರು ರವಾನಿಸಿದ ಸಂದೇಶಗಳಿಂದ ನಾನು ಮುದಗೊಂಡಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವಾಗುತ್ತದೆ' ಎಂದು ಕೋವಿಂದ್ ಅವರು ಕಳೆದ ವಾರ ತಿಳಿಸಿದ್ದರು.