ನಿರ್ಭಯಾ ಅತ್ಯಾಚಾರ: ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ
ನವದೆಹಲಿ, ಜನವರಿ 17: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ತಿರಸ್ಕರಿಸಿದ್ದಾರೆ.
ಹೀಗಾಗಿ ನಾಲ್ವರು ಆರೋಪಿಗಳ ಪೈಕಿ ಮುಕೇಶ್ ಸಿಂಗ್ ಗಲ್ಲುಶಿಕ್ಷೆ ಖಚಿತವಾಗಿದೆ. ಕ್ಷಮಾದಾನದ ಅರ್ಜಿ ಅಪರಾಧಿಗಳಿಗೆ ಇರುವ ಕೊನೆಯ ಆಯ್ಕೆಯಾಗಿದೆ. ಆದರೆ ಈ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಇತರೆ ಮೂವರು ಅಪರಾಧಿಗಳು ಇದುವರೆಗೂ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ. ಒಂದು ವೇಳೆ ಅವರಲ್ಲಿ ಒಬ್ಬರು ಅರ್ಜಿ ಸಲ್ಲಿಸಿದ್ದರೂ ಮರಣದಂಡನೆ ಜಾರಿ ವಿಳಂಬವಾಗುವ ಸಾಧ್ಯತೆ ಇದೆ.
ಅಪರಾಧ ಮಾಡಿರುವುದು ಅವರು, ಶಿಕ್ಷೆ ಆಗುತ್ತಿರುವುದು ನಮಗೆ: ನಿರ್ಭಯಾ ತಾಯಿ ಆಕ್ರೋಶ
ಕೇಂದ್ರ ಗೃಹ ಸಚಿವಾಲಯವು ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ರವಾನಿಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಕೇಶ್ ಸಿಂಗ್ನ ಕ್ಷಮಾದಾನದ ಅರ್ಜಿಯನ್ನು ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ್ದರು. ಕೇಂದ್ರ ಗೃಹ ಸಚಿವಾಲಯ ಕೂಡ ಕ್ಷಮಾದಾನಕ್ಕೆ ನಿರಾಕರಿಸಿ, ರಾಷ್ಟ್ರಪತಿಗಳಿಗೂ ಶಿಫಾರಸು ಮಾಡಿತ್ತು.
ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ಕೋರ್ಟ್ ಮಹತ್ವದ ಸೂಚನೆ
ನ್ಯಾಯಾಲಯದ ಆದೇಶದಂತೆ ನಾಲ್ವರು ಅಪರಾಧಿಗಳನ್ನು ಜ.22ರ ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ನೇಣಿಗೇರಿಸಬೇಕು. ಆದರೆ ಕಾನೂನು ಪ್ರಕ್ರಿಯೆ ಮತ್ತು ಕ್ಷಮಾದಾನದ ಅರ್ಜಿ ಕಾರಣ ಅಂದು ಗಲ್ಲುಶಿಕ್ಷೆ ಜಾರಿ ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಸರ್ಕಾರ ಹೈಕೋರ್ಟ್ಗೆ ತಿಳಿಸಿತ್ತು.