Draupadi Murmu: ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಮುರ್ಮುಗೆ ಝಡ್+ ಭದ್ರತೆ
ನವದೆಹಲಿ, ಜೂ. 22: ಎನ್ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಸಿಆರ್ಪಿಎಫ್ ಕಮಾಂಡೋ ಪಡೆಯ ಝಡ್ + ಭದ್ರತೆಯನ್ನು ಕೇಂದ್ರವು ನೀಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸಿಆರ್ಪಿಎಫ್ ಸಶಸ್ತ್ರ ಪಡೆ ಬುಧವಾರ ಮುಂಜಾನೆ 64 ವರ್ಷದ ದ್ರೌಪದಿ ಮುರ್ಮು ಅವರ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜೂನ್ 25ರಂದು ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ?
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ಬಿಜೆಪಿ ನಾಯಕರನ್ನು ಒಳಗೊಂಡ ಸಂಸದೀಯ ಮಂಡಳಿಯ ಸಭೆಯ ನಂತರ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಒಡಿಶಾದ ನಾಯಕಿ ದ್ರೌಪದಿ ಮುರ್ಮು ಅವರ ಉಮೇದುವಾರಿಕೆಯನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದರು.
ನಡ್ಡಾ ಅವರ ಪ್ರಕಟಣೆ ನಂತರ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ಪಿಎಫ್) ತನ್ನ ವಿಐಪಿ ರಕ್ಷಣಾ ತಂಡವನ್ನು ದ್ರೌಪದಿ ಮುರ್ಮು ಅವರ ಭದ್ರತೆಯ ಉಸ್ತುವಾರಿ ವಹಿಸಲು ನಿಯೋಜಿಸುವಂತೆ ಸೂಚಿಸಿದೆ. ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಗಾಗಿ ಕೇಂದ್ರ ಭದ್ರತಾ ಏಜೆನ್ಸಿಗಳು ರಚಿಸಿದ ಬೆದರಿಕೆ ಗ್ರಹಿಕೆ ಭದ್ರತಾ ವರದಿಯು ಗೃಹ ಸಚಿವಾಲಯದ ನಿರ್ಧಾರಕ್ಕೆ ಆಧಾರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Draupadi Murmu: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು
ಒಡಿಶಾ ಮೂಲದ ಅರೆಸೇನಾ ಪಡೆಯ ಸುಮಾರು 14ರಿಂದ 16 ಸಿಬ್ಬಂದಿಯ ತುಕಡಿ ದ್ರೌಪದಿ ಮುರ್ಮು ಅವರಿಗೆ ಭದ್ರತೆ ಒದಗಿಸುವ ಕಾರ್ಯವನ್ನು ವಹಿಸಿಕೊಂಡಿದೆ. ಮುರ್ಮು ಅವರು ರಾಜ್ಯ ಮತ್ತು ದೇಶದಾದ್ಯಂತ ಎಲ್ಲಿಗೆ ಹೋದರೂ ಸಿಆರ್ಪಿಎಫ್ ಪಡೆ ಬೆಂಗಾವಲು ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಒಡಿಶಾದ ರಾಯರಂಗ್ಪುರದಲ್ಲಿರುವ ಮುರ್ಮು ಅವರ ಮನೆಗೆ ಸಿಆರ್ಪಿಎಫ್ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ.
ದ್ರೌಪದಿ ಮುರ್ಮು ಅವರು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಶಾಸಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಅವರ ಉಮೇದುವಾರಿಕೆಗೆ ಬೆಂಬಲ ಕೋರಲು ವ್ಯಾಪಕವಾಗಿ ಪ್ರಯಾಣಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಪರವಾಗಿ ಸಂಖ್ಯಾಬಲ ಸಂಗ್ರಹವಾಗಿರುವುದರಿಂದ ಅವರು ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ಕಮಾಂಡೋ ತಂಡವು ಅವರನ್ನು ಕಾಪಾಡಲಿದೆ.
ಸಿಆರ್ಪಿಎಫ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ವಿಐಪಿಗಳನ್ನು ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವರ ರಕ್ಷಣೆ ಜವಾಬ್ದಾರಿಯನ್ನು ನೋಡಿಕೊಳ್ಳುತ್ತದೆ. 2017ರಲ್ಲಿ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ಮತ್ತು ಪ್ರಸ್ತುತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕೇಂದ್ರವು ಎನ್ಎಸ್ಜಿ ಕಮಾಂಡೋ ಪಡೆಯಿಂದ ಭದ್ರತೆಯನ್ನು ಒದಗಿಸಿತ್ತು.
ರಾಷ್ಟ್ರಪತಿ ಕೋವಿಂದ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಹೊರಬೀಳಲಿದೆ. ರಾಷ್ಟ್ರಪತಿ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ.
Recommended Video