ಜಾಧವ್ ನ ನೇಣಿಗೇರಿಸಿದರೆ ಅದು ಪಾಕ್ ನ ಪೂರ್ವನಿಯೋಜಿತ ಕೊಲೆ
ಪಾಕಿಸ್ತಾನದ ಮಿಲಿಟರಿ ಕೋರ್ಟ್ ಗೂಢಚಾರಿಕೆ ಹಾಗೂ ವಿಧ್ವಂಸಕ ಕೃತ್ಯದ ಸಂಚು ಆರೋಪದಲ್ಲಿ ಕುಲಭೂಷಣ ಜಾಧವ್ ಗೆ ಮರಣದಂಡನೆ ವಿಧಿಸಿದೆ. ಈ ತೀರ್ಮಾನದ ವಿರುದ್ಧ ಭಾರತವು ಆಕ್ರೋಶ ದಾಖಲಿಸಿದೆ.
ನವದೆಹಲಿ, ಏಪ್ರಿಲ್ 10: ಒಂದು ವೇಳೆ ಪಾಕಿಸ್ತಾನ ಕುಲಭೂಷಣ್ ಯಾದವ್ ಗೆ ಮರಣದಂಡನೆ ಶಿಕ್ಷೆ ಜಾರಿಗೆ ಮುಂದಾದರೆ ಅದನ್ನು ಪೂರ್ವ ನಿಯೋಜಿತ ಹತ್ಯೆ ಅಂತಲೇ ಪರಿಗಣಿಸಬೇಕಾಗುತ್ತದೆ ಎಂದು ಭಾರತ ಹೇಳಿದೆ. ಗೂಢಚರ್ಯೆ ಆರೋಪದಲ್ಲಿ ಜಾಧವ್ ನನ್ನು ನೇಣಿಗೇರಿಸಲು ಪಾಕಿಸ್ತಾನ ಸೋಮವಾರ ತೀರ್ಮಾನಿಸಿದೆ.
ಪಾಕಿಸ್ತಾನ ಹೈ ಕಮೀಷನರ್ ಗೆ ಈ ಬಗ್ಗೆ ತನ್ನ ಆಕ್ಷೇಪ ದಾಖಲಿಸಿರುವ ಭಾರತ, ಕಾನೂನಿನ ಪ್ರಾಥಮಿಕ ಅಂಶಗಳು ಹಾಗೂ ನ್ಯಾಯವನ್ನು ಅನುಸರಿಸಿಲ್ಲ ಅಂದಾಗ ಅಂಥ ಪ್ರಕರಣವನ್ನು ಪೂರ್ವನಿಯೋಜಿತ ಕೊಲೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ. ಜಾಧವ್ ಒಬ್ಬ ವ್ಯಾಪಾರಸ್ಥ. ಆತನನ್ನು ಪಾಕಿಸ್ತಾನವು ಇರಾನ್ ನಿಂದ ಅಪಹರಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.[ಪಾಕಿಸ್ತಾನ ಮಿಲಿಟರಿ ಕೋರ್ಟ್ ನಲ್ಲಿ ಕುಲಭೂಷಣ್ ಜಾಧವ್ ಗೆ ಮರಣದಂಡನೆ]
ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಕರಣದ ಮೂಲಕ ಬಗೆಹರಿಸಲು ಯತ್ನಿಸಿದೆವು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಸಚಿವಾಲಯ ಹೇಳಿದೆ. ಈ ಮಧ್ಯೆ ಭಾರತವು ಬುಧವಾರ ಪಾಕಿಸ್ತಾನದ ಹನ್ನೆರಡು ಕೈದಿಗಳನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಜಾಧವ್ ಶಿಕ್ಷೆ ಪ್ರಕಟವಾದ ನಂತರ ಪಾಕಿಸ್ತಾನ ಕೈದಿಗಳ ಬಿಡುಗಡೆ ನಿರ್ಧಾರವನ್ನು ತಡೆಹಿಡಿಯಲಾಗಿದೆ.