ಬ್ಯಾಂಕ್ ನೇಮಕಾತಿ:ಕನ್ನಡಿಗರ ಪರ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿ
ನವದೆಹಲಿ, ಜೂನ್ 20: ಸ್ಥಳೀಯ ಮತ್ತು ಗ್ರಾಮೀಣ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಕುರಿತು 2014 ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಮತ್ತೆ ಹೊರಡಿಸಬೇಕು ಎಂದು ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮತ್ತು ಶೋಭಾ ಕರಂದ್ಲಾಜೆ ಅವರು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಇಂದು ಮನವಿ ಮಾಡಿದರು.
ಐಬಿಪಿಎಸ್ ಆರ್ಆರ್ಬಿ (ಸ್ಥಳೀಯ ಮತ್ತು ಗ್ರಾಮೀಣ ಬ್ಯಾಂಕ್ ನೇಮಕಾತಿ) ಅರ್ಜಿ ಸಲ್ಲಿಸುವವರು 10ನೇ ತರಗತಿ ವರೆಗೆ ಮಾತೃಭಾಷೆಯಲ್ಲಿ ಅಭ್ಯಾಸ ಮಾಡಿರಬೇಕು ಎಂದು 2014 ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು, ಆದರೆ ಆ ನಂತರ ಅದನ್ನು ಬದಲಾವಣೆ ಮಾಡಲಾಗಿತ್ತು. ಹಾಗಾಗಿ ಸಂಸದರು ಈ ಮನವಿ ಸಲ್ಲಿಸಿದ್ದಾರೆ.
ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನ ಕನ್ನಡಿಗರ ಮಿಂಚು!
ಈ ಬಗ್ಗೆ ಪ್ರತಾಪ್ ಸಿಂಹ ಅವರು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚಿತ್ರದಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಇದ್ದಾರೆ. ಅದೇ ಚಿತ್ರದಲ್ಲಿ ಬಿ.ವೈ.ರಾಘವೇಂದ್ರ, ಜಿ.ಎಂ.ಸಿದ್ದೇಶ್ವರ ಅವರು ಸಹ ಪಕ್ಕದಲ್ಲಿ ಕುಳಿತಿದ್ದಾರೆ.
ಪ್ರತಾಪ್ ಸಿಂಹ ಅವರು ಈ ಹಿಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೂ ಇದೇ ಮನವಿಯನ್ನು ಸಲ್ಲಿಸಿದ್ದರು. ಆದರೆ ಆಗ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ. ಈಗಲೂ ಸಹ ಪ್ರತಾಪ್ ಸಿಂಹ ಅವರು ಮನವಿ ನೀಡಿದ್ದರೂ ಸಹ ಈಗಾಗಲೇ ಹಳೆಯ ನಿಯಮದಂತೆಯೇ ಅಧಿಸೂಚನೆಯನ್ನು ಹೊರಡಿಸಲಾಗಿದೆ.