ಸ್ಮೃತಿ ಇರಾನಿ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಸಾರ ಭಾರತಿ ಸಿಇಓ
ನವದೆಹಲಿ, ಮಾರ್ಚ್ 05: ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಪ್ರಸಾರ ಭಾರತಿ ನೌಕರರಿಗೆ ಸಂಬಳ ನೀಡದೆ ಸತಾಯಿಸುತಿದ್ದಾರೆ ಎಂದು ಆನ್ಲೈನ್ ಪತ್ರಿಕೆ ವರದಿ ಮಾಡಿದ ಬೆನ್ನಲ್ಲೆ ಪ್ರಸಾರ ಭಾರತಿ ಕಾರ್ಯನಿರ್ವಹಣಾ ಅಧಿಕಾರಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದು, ನೌಕರರಿಗೆ 208 ಕೋಟಿ ರೂ ಸಂಬಳ ನೀಡಲಾಗಿದೆ ಎಂದು ಹೇಳಿದ್ದಾರೆ.
ಸುದ್ದಿ ಪ್ರಕಟವಾದ ಕೂಡಲೇ ಸ್ಮೃತಿ ಇರಾನಿ ಹಾಗೂ ಪ್ರಸಾರ ಭಾರತಿ ಮೇಲೆ ಭಾರಿ ಟೀಕೆಗಳು ಕೇಳಿಬಂದಿತ್ತು. ಹಾಗಾಗಿ ಟ್ವೀಟ್ ಮೂಲಕ ವಿವಾದಕ್ಕೆ ತೆರೆ ಎಳೆದಿರುವ ಪ್ರಸಾರ ಭಾರತಿ ಸಿಇಓ ಶಶಿಶೇಖರ್ ವೆಂಪತಿ ಫೆಬ್ರವರಿ 28ರಂದೇ ಪ್ರಸಾರ ಭಾರತಿ, ದೂರದರ್ಶನದ ನೌಕರರಿಗಾಗಿ 208 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
'ಮನುಸ್ಮೃತಿ ಇರಾನಿ'ಗೆ ಪಾಠ ಕಲಿಸಲು ವೇಮುಲಾ ತಾಯಿ ಕಣಕ್ಕಿಳಿಯಲಿ: ಮೇವಾನಿ
ಪ್ರಸಾರ ಭಾರತಿಯ ವಿರುದ್ಧ ದುರುದ್ದೇಶಪೂರಕ ಆರೋಪ ಮಾಡಲಾಗಿದೆ ಎಂದು ಹೇಳಿರುವ ಅವರು, 2017-18ನೇ ಸಾಲಿನಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ 1989 ಕೋಟಿ ರೂ ಹಣ ಅನುದಾನವಾಗಿ ಬಂದಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ಆನ್ಲೈನ್ ಸುದ್ದಿವಾಹಿನಿಯೊಂದು ಪ್ರಸಾರ ಭಾರತಿಯ ಸಿಬ್ಬಂದಿಗಳಿಗೆ ಜನವರಿ ಮತ್ತು ಫೆಬ್ರವರಿ ತಿಂಗಳ ಸಂಬಳ ನೀಡದೆ ಸತಾಯಿಸಲಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಅನುದಾನವನ್ನು ನೀಡದೇ ಇರುವುದೇ ಇದಕ್ಕೆ ಕಾರಣ ಎಂದು ವರದಿ ಮಾಡಿತ್ತು.