5 ಟ್ರಿಲಿಯನ್ ಆರ್ಥಿಕತೆ ಸ್ವರ್ಗದಿಂದ ಉತ್ಪತ್ತಿಯಾಗೊಲ್ಲ: ಪ್ರಣಬ್ ಮುಖರ್ಜಿ
ನವದೆಹಲಿ, ಜುಲೈ 19: ಲೋಕಸಭೆ ಚುನಾವಣೆಯ ನಂತರ ಪರೋಕ್ಷವಾಗಿ ಎನ್ ಡಿ ಎ ಸರ್ಕಾರವನ್ನು ಹೊಗಳಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದೀಗ ಸರ್ಕಾರವನ್ನು ಟೀಕಿಸುವಂಥ ಹೇಳಿಕೆ ನೀಡಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಲ್ಲೇಖಿಸಿದ 5 ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಮಾತನಾಡಿದ ಪ್ರಣಬ್ ದಾ, "ಐದು ಟ್ರಿಲಿಯನ್ ಆರ್ಥಿಕತೆ ಸ್ವರ್ಗದಿಂದ ಉತ್ಪತ್ತಿಯಾಗೊಲ್ಲ. ಹಿಂದಿನ ಸರ್ಕಾರಗಳು ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿವೆ ಎಂಬುದನ್ನು ಮರೆಯಬಾರದು" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪ್ರಣಬ್ ಮುಖರ್ಜಿ ಹೇಳಿದರು.
ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಪ್ರಣಬ್ ಮುಖರ್ಜಿ ಹೇಳಿಕೆ
"ಬಜೆಟ್ ಮಂಡಿಸುವ ಸಂದರ್ಭದಲ್ಲಿ ವಿತ್ತ ಸಚಿವರು 2024 ರ ಹೊತ್ತಿಗೆ ಭಾರತವು 5 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಿದ ದೇಶವಾಗಲಿದೆ ಎಂದಿದ್ದಾರೆ. ಆದರೆ ಅದು ಸ್ವರ್ಗದಿಂದ ಉತ್ಪತ್ತಿಯಾಗೋಲ್ಲ. ಅದಕ್ಕೆ ಒಮದು ಭದ್ರ ಬುನಾದಿ ಬೇಕು. ಅದನ್ನು ಬ್ರಿಟಿಷರು ಹಾಕಿಕೊಟ್ಟಿಲ್ಲ. ಆದರೆ ಸ್ವಾತಂತ್ರ್ಯಾನಂತರ ಬಂದ ಸರ್ಕಾರಗಳು ಅದನ್ನು ಹಾಕಿಕೊಟ್ಟಿವೆ" ಎಂದು ಅವರು ಹೇಳಿದರು.
"ಕಳೆದ 55 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರವು ದೇಶವನ್ನು ನಿರ್ಲಕ್ಷ್ಯಿಸಿತ್ತು ಎಂದು ಆರೋಪಿಸುವವರಿಗೆ ಗೊತ್ತಿರಲಿ, ಇಂದು ಭಾರತ ಐದು ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಸಾಕಷ್ಟಿದೆ. ಒಂದು ಯೋಜನಾಬದ್ಧವಾಗಿ ಆರ್ಥಿಕತೆಯನ್ನು ಕಟ್ಟುವಲ್ಲಿ ನಮ್ಮ ಹಿರಿಯ ನಾಯಕರು ನಂಬಿಕೆ ಇರಿಸಿದ್ದರು. ಆದರೆ ಇಂದು ಯೋಜನಾ ಆಯೋಗವನ್ನೇ ಮುಚ್ಚಲಾಗಿದೆ" ಎಂದು ಪ್ರಣಬ್ ಮುಖರ್ಜಿ ಹೇಳಿದರು.
ಕಾಂಗ್ರೆಸ್ಸಿಗೆ ಮುಖಭಂಗ ಉಂಟುಮಾಡಿದ ಪ್ರಣಬ್ ಮುಖರ್ಜಿ ನಡೆ
"ಕಾಂಗ್ರೆಸ್ ಸರ್ಕಾರ ನಡೆಸುವ ಮೊದಲು ಶೂನ್ಯದಲ್ಲಿದ್ದ ಆರ್ಥಿಕತೆಯನ್ನು 1.8 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಿದ ಕೀರ್ತಿ ಪಕ್ಷದ್ದು. ನಮ್ಮ ಮಾಜಿ ಪ್ರಧಾನಿ ಜವಹರಲಾಲ್ ನೆಹರು, ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್ ಅವರು ಈ ದೇಶದ ಆರ್ಥಿಕತೆಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟರು" ಎಂದು ಮುಖರ್ಜಿ ನೆನಪಿಸಿಕೊಂಡರು.