ಸರಿಯಾಗಿ ಒಂದು ವರ್ಷದ ಹಿಂದೆ ಭಾರತ ರತ್ನ ಸಿಕ್ಕಿತ್ತು: ಪ್ರಣವ್ ಮುಖರ್ಜಿ ಸ್ಥಿತಿ ನೆನೆದು ಮಗಳು ಭಾವುಕ
ನವದೆಹಲಿ, ಆಗಸ್ಟ್ 12: ಮಿದುಳಿನ ಸರ್ಜರಿಗೆ ಒಳಗಾಗಿ ವೆಂಟಿಲೇಟರ್ನಲ್ಲಿ ಇರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಕೊರೊನಾ ವೈರಸ್ಗೂ ತುತ್ಯಾಗಿರುವ ಪ್ರಣವ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಈ ನಡುವೆ ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.
ತಂದೆಯ ಆರೋಗ್ಯದ ವಿಚಾರದಲ್ಲಿ ದೇವರೇ ದಯೆ ತೋರಬೇಕು ಎಂದಿರುವ ಅವರು, ಜೀವನದ ದುಃಖ ಮತ್ತು ಸಂತೋಷ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಲು ಶಕ್ತಿ ದೊರಕುವಂತೆ ಪ್ರಾರ್ಥಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 8 ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನವಾಗಿತ್ತು. ಏಕೆಂದರೆ ಅಂದು ನನ್ನ ತಂದೆ ಭಾರತ ರತ್ನ ಪಡೆದುಕೊಂಡಿದ್ದರು. ಸರಿಯಾಗಿ ಒಂದು ವರ್ಷದ ಬಳಿಕ ಆಗಸ್ಟ್ 10ರಂದು ಅವರು ತೀವ್ರವಾಗಿ ಕಾಯಿಲೆಗೆ ಬಿದ್ದಿದ್ದಾರೆ. ದೇವರು ಅವರಿಗೆ ಸಾಧ್ಯವಾದ ಎಲ್ಲ ಒಳಿತನ್ನು ನೀಡಲಿ ಮತ್ತು ನನಗೆ ಸಮಚಿತ್ತದಿಂದ ಜೀವನದ ಖುಷಿ ಹಾಗೂ ದುಃಖವನ್ನು ಎದುರಿಸುವ ಶಕ್ತಿ ನೀಡಲಿ. ಎಲ್ಲರ ಕಾಳಜಿಗಾಗಿ ನಾನು ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಶರ್ಮಿಷ್ಠಾ ಟ್ವೀಟ್ ಮಾಡಿದ್ದಾರೆ.
ಚಿಕಿತ್ಸೆಗೂ ಮುನ್ನ ಪರೀಕ್ಷೆ
84 ವರ್ಷ ಪ್ರಣವ್ ಮುಖರ್ಜಿ ಅವರನ್ನು ಮೆದುಳಿನ ಶಸ್ತ್ರಚಿಕಿತ್ಸೆಗಾಗಿ ನವದೆಹಲಿಯ ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೂ ಮುನ್ನ ಪರೀಕ್ಷೆ ನಡೆಸಿದಾಗ ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು.
ಮತ್ತಷ್ಟು ಹದಗೆಟ್ಟ ಆರೋಗ್ಯ
ಪ್ರಣವ್ ಮುಖರ್ಜಿ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಆಗಸ್ಟ್ 10ರಂದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇದುವರೆಗೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅವರು ವೆಂಟಿಲೇಟರ್ನಲ್ಲಿಯೇ ಇದ್ದಾರೆ ಎಂದು ಆಸ್ಪತ್ರೆ ಆರೋಗ್ಯ ವರದಿ ತಿಳಿಸಿದೆ.
ತವರೂರಲ್ಲಿ ಮೃತ್ಯುಂಜಯ ಯಜ್ಞ
ಪ್ರಣವ್ ಮುಖರ್ಜಿ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಜನ್ಮಾಷ್ಠಮಿಯ ದಿನದಂದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿನ ಕಿರ್ನಹಾರ್ ಪ್ರದೇಶದಲ್ಲಿ ಜಪೇಶ್ವರ ಶಿವ ಮಂದಿರದಲ್ಲಿ ಮಹಾ ಮೃತ್ಯುಂಜಯ ಯಜ್ಞ ಆರಂಭಿಸಿದ್ದು, ಇದು ನಿರಂತರ ಮೂರು ದಿನ ನಡೆಯಲಿದೆ. ಇದು ಪ್ರಣವ್ ಮುಖರ್ಜಿ ಅವರ ಪೂರ್ವಜರ ಊರಾಗಿದೆ.
ಐದು ವರ್ಷ ರಾಷ್ಟ್ರಪತಿ
ಪ್ರಣವ್ ಮುಖರ್ಜಿ ಅವರು 2012-2017ರ ಅವಧಿಯವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ಕಳೆದ ವರ್ಷ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಮಿದುಳಿನಲ್ಲಿ ಗೆಡ್ಡೆ ಬೆಳೆದ ಕಾರಣದಿಂದ ಅದರ ಶಸ್ತ್ರಚಿಕಿತ್ಸೆಗೆಂದು ಅವರು ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅದಕ್ಕೂ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು.