ನಾನು ಸಚಿನ್ ಅಭಿಮಾನಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ನವದೆಹಲಿ, ನ. 15 : ದೇಶದಲ್ಲಿ ಕ್ರಿಕೆಟ್ ಇಷ್ಟ ಪಡುವ ಕೋಟ್ಯಾಂತರ ಜನರು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಸಾಧನೆಗೆ ಮೆಚ್ಚುಗೆ ಸೂಚಿಸುತ್ತಾರೆ. ಸದ್ಯ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ತೆಂಡುಲ್ಕರ್ ಅವರ ಸಾಧನೆ ಅಭಿನಂದಿಸುವ ಅಭಿಮಾನಿಗಳ ಸಾಲಿಗೆ ನಾನು ಕೂಡಾ ಸೇರುತ್ತಿದ್ದೇನೆ ಎಂದು ದೇಶದ ಪ್ರಥಮ ಪ್ರಜೆ ಹೇಳಿದ್ದಾರೆ.
ಗುರುವಾರ ಮುಂಬೈನಲ್ಲಿ ಸಚಿನ್ ತೆಂಡುಲ್ಕರ್ ತಮ್ಮ ವೃತ್ತಿ ಜೀವನದ 200ನೇ ಟೆಸ್ಟ್ ಆಡುತ್ತಿದ್ದರು. ಇತ್ತ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಚಿನ್ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸಲು ಟಿ-10 ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ರಾಷ್ಟ್ರಪತಿ ಭವನದ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ದೆಹಲಿ ಪೊಲೀಸ್ ಸೇರಿ ನಾಲ್ಕು ತಂಡಗಳು ಈ ಚುಟುಕು ಕ್ರಿಕೆಟ್ ಪಂದ್ಯದಲ್ಲಿ ಸೆಣಸಾಡಿದವು.
ವಿಜೇತ ತಂಡಕ್ಕೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಮ್ಮ ಪಾಲಿಗೆ ವಿಶೇಷ ದಿನವಾಗಿದೆ, ಸಚಿನ್ ತೆಂಡುಲ್ಕರ್ ಅವರ ಸಾಧನೆಯನ್ನು ಅಭಿನಂದಿಸುವ ಅಭಿಮಾನಿಗಳ ಸಾಲಿಗೆ ನಾನು ಕೂಡ ಸೇರುತ್ತಿದ್ದೇನೆ ಎಂದು ಹೇಳಿದರು. ಆ ಮೂಲಕ ಬ್ಯಾಟಿಂಗ್ ದಿಗ್ಗಜನಿಗೆ ತಮ್ಮ ಗೌರವ ಸಲ್ಲಿಸಿದರು.
ಸಚಿನ್ ತೆಂಡುಲ್ಕರ್ ಅವರು ಕ್ರಿಕೆಟ್ ಆಟದ ಮತ್ತು ಭಾರತದ ಶ್ರೇಷ್ಠ ರಾಯಭಾರಿ ಆಗಿದ್ದಾರೆ. ಮಾತ್ರವಲ್ಲದೇ ತನ್ನ ಅಭೂತಪೂರ್ವ ದಾಖಲೆಗಳಿಂದ ಯುವ ಜನಾಂಗದ ಕಣ್ಮಣಿಯಾಗಿದ್ದಾರೆ ಎಂದು ಪ್ರಣಬ್ ಮುಖರ್ಜಿ ಗುಣಗಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ಚುಟುಕು ಕ್ರಿಕೆಟ್ ಆಯೋಜಿಸುವ ಮೂಲಕ ತಮ್ಮ ಕ್ರೀಡಾ ಆಸಕ್ತಿಯನ್ನು ಪ್ರದರ್ಶಿಸಿದರು. ಚಿತ್ರಗಳಲ್ಲಿ ಚುಟುಕು ಕ್ರಿಕೆಟ್ ನೋಟ
ಸಚಿನ್ ತೆಂಡುಲ್ಕರ್ ಗಾಗಿ ಚುಟುಕು ಪಂದ್ಯ
ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರಪತಿ ಭವನದಲ್ಲಿ ಸಚಿನ್ ಅವರು 200ನೇ ಟೆಸ್ಟ್ ಪಂದ್ಯ ಆಡುವ ದಿನವೇ ಚುಟುಕು ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು.
ಎಲ್ಲಿತ್ತು ಕ್ರಿಕೆಟ್ ಪಂದ್ಯ
ರಾಷ್ಟ್ರಪತಿ ಭವನದ ಆವರಣದಲ್ಲಿರುವ ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದಲ್ಲಿ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಈ ಮೈದಾನವನ್ನು ಜುಲೈ 25ರಂದು ರಾಷ್ಟ್ರಪತಿ ಉದ್ಘಾಟಿಸಿದ್ದರು.
ಸಿಬ್ಬಂದಿ ಮನಿವಿಯಂತೆ ಪಂದ್ಯ
ರಾಷ್ಟ್ರಪತಿ ಭವನದ ಸಿಬ್ಬಂದಿಯ ಮನವಿಯಂತೆ ಪಂದ್ಯವನ್ನು ಏರ್ಪಡಿಸಲಾಗಿತ್ತು. ಸಚಿನ್ ತೆಂಡುಲ್ಕರ್ ಅವರಿಗೆ ಗೌರವ ಸಲ್ಲಿಸಲು ಟಿ-10 ಪಂದ್ಯ ಆಯೋಜಿಸಲು ಸ್ವತಃ ದೇಶದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅನುಮತಿ ನೀಡಿದ್ದರು.
ಯಾರು ಆಟಗಾರರು
ಸದಾ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಚೇರಿ ಸಿಬ್ಬಂದಿ, ಅವರ ರಕ್ಷಣಾ ಸಿಬ್ಬಂದಿ, ದೆಹಲಿ ಪೊಲೀಸ್ ಸಿಬ್ಬಂದಿ ಈ ಚುಟುಕು ಕ್ರಿಕೆಟ್ ನಲ್ಲಿ ಆಟಗಾರರಾಗಿದ್ದರು. ಇವರನ್ನು ವಿಭಜಿಸಿ ನಾಲ್ಕು ತಂಡಗಳಾಗಿ ವಿಂಗಡಿಸಲಾಗಿತ್ತು.
ನಾಲ್ಕು ತಂಡಗಳು
ಪ್ರೆಸಿಡೆಂಟ್ ಸೆಕ್ರೇಟಿಯಟ್ ಅವೆಂಜರ್ಸ್, ಹೌಸ್ ಹೋಲ್ಡ್ ರಾಯಲ್ಸ್, ದೆಹಲಿ ಪೊಲೀಸ್ ಚಾಲೆಂಜರ್ಸ್, ಪಿಬಿಜಿ ಚಾರ್ಜರ್ಸ್ ಎಂಬ ನಾಲ್ಕು ತಂಡಗಳು ಟಿ-10 ಕ್ರಿಕೆಟ್ ಪಂದ್ಯದಲ್ಲಿ ಸೆಣಸಾಡಿದವು. ಒಟ್ಟು ಲೀಗ್ ನಲ್ಲಿ ಆರು ಪಂದ್ಯ ಮತ್ತು ಫೈನಲ್ ಪಂದ್ಯ ನಡೆಯಿತು.
ರಾಷ್ಟ್ರಪತಿಯಿಂದ ಪಂದ್ಯ ವೀಕ್ಷಣೆ
ರಾಷ್ಟ್ರಪತಿ ಭವನದ ಆವರಣದಲ್ಲಿಯೇ ಆಯೋಜಿಸಿದ್ದ ತಮ್ಮ ಕಚೇರಿಯ ಸಿಬ್ಬಂದಿಯೇ ಆಡುತ್ತಿದ್ದ ಕ್ರಿಕೆಟ್ ಆಟವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವೀಕ್ಷಿಸಿದರು. ಫೈನಲ್ ಪಂದ್ಯದಲ್ಲಿ ಜಯಗಳಿಸಿದ ತಂಡಕ್ಕೆ ಟ್ರೋಫಿ ವಿತರಣೆ ಮಾಡುವ ಮೂಲಕ ಕ್ರೀಡಾ ಆಸಕ್ತಿಯನ್ನು ಪ್ರದರ್ಶಿಸಿದರು.
ಸಚಿನ್ ಅಭಿಮಾನಿಗಳ ಸಾಲಿಗೆ ಸೇರ್ಪಡೆ
ವಿಜೇತ ತಂಡಕ್ಕೆ ಟ್ರೋಫಿ ಪ್ರಧಾನ ಮಾಡಿ ಮಾತನಾಡಿದ ಪ್ರಣಬ್ ಮುಖರ್ಜಿ, ನಮ್ಮ ಪಾಲಿಗೆ ಇದು ವಿಶೇಷ ದಿನವಾಗಿದೆ, ಸಚಿನ್ ತೆಂಡುಲ್ಕರ್ ಅವರ ಸಾಧನೆಯನ್ನು ಅಭಿನಂದಿಸುವ ಅಭಿಮಾನಿಗಳ ಸಾಲಿಗೆ ನಾನು ಕೂಡ ಸೇರುತ್ತಿದ್ದೇನೆ ಎಂದು ಹೇಳಿದರು.
ಸಚಿನ್ ಶೇಷ್ಠ ರಾಯಭಾರಿ
ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಸಚಿನ್ ತೆಂಡುಲ್ಕರ್ ಅವರು ಕ್ರಿಕೆಟ್ ಆಟದ ಮತ್ತು ಭಾರತದ ಶ್ರೇಷ್ಠ ರಾಯಭಾರಿ ಆಗಿದ್ದಾರೆ. ಮಾತ್ರವಲ್ಲದೇ ತನ್ನ ಅಭೂತಪೂರ್ವ ದಾಖಲೆಗಳಿಂದ ಯುವ ಜನಾಂಗದ ಕಣ್ಮಣಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು.