ಸಿಎಎ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪ್ರಣವ್ ಮುಖರ್ಜಿ
ನವದೆಹಲಿ, ಜನವರಿ 24: ಪ್ರಜಾಪ್ರಭುತ್ವದಲ್ಲಿ ಅಸಮ್ಮತಿ ಎನ್ನುವುದು ಬಹಳ ಮುಖ್ಯ ಎಂದಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಶಾಂತಿಯುತ ಪ್ರತಿಭಟನೆಗಳು ದೇಶದಲ್ಲಿನ ಪ್ರಜಾಪ್ರಭುತ್ವವನ್ನು ಪುನರಜ್ಜೀವನಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಮ್ಮತವು ಪ್ರಜಾಪ್ರಭುತ್ವದ ಜೀವನಾಡಿ. ಆಲೋಚನೆ, ಚರ್ಚೆ, ವಾದ ಮತ್ತು ವಿರೋಧ ವ್ಯಕ್ತಪಡಿಸುವಂತಹ ಕ್ರಿಯೆಗಳ ಮೂಲಕ ಪ್ರಜಾಪ್ರಭುತ್ವ ಬೆಳೆಯುತ್ತದೆ. ಟೀಕೆಗಳು ಸರ್ವಾಧಿಕಾರಿ ಪ್ರವೃತ್ತಿಗಳು ನೆಲಕಚ್ಚುವಂತೆ ಮಾಡುತ್ತವೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎನ್ಆರ್ಸಿ-ಸಿಎಎ ಪರ ಅಭಿಯಾನ ನಡೆಸಲಿರುವ ರಾಜ್ ಠಾಕ್ರೆ
ದೆಹಲಿಯಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಣವ್ ಮುಖರ್ಜಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧದ ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜವು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಆದರೆ ಸಂವಿಧಾನದಲ್ಲಿ ನಂಬಿಕೆ ಪ್ರತಿಪಾದಿಸುತ್ತಿರುವ ಯುವಜನರನ್ನು ನೋಡಿ ಖುಷಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
'ಕಳೆದ ಕೆಲವು ತಿಂಗಳುಗಳಿಂದ ಭಾರಿ ಸಂಖ್ಯೆಯಲ್ಲಿ ಜನರು, ಮುಖ್ಯವಾಗಿ ಯುವಜನರು ರಸ್ತೆಗೆ ಇಳಿದು ಕೆಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯದ ಕುರಿತು ಧ್ವನಿ ಎತ್ತುತ್ತಿದ್ದಾರೆ. ಇದು ಬಹಳ ಮುಖ್ಯ. ಭಾರತದ ಸಂವಿಧಾನದಲ್ಲಿ ಅವರ ನಂಬಿಕೆ ಮತ್ತು ಪ್ರತಿಪಾದನೆಗಳನ್ನು ನೋಡುವುದು ಮುದ ನೀಡುತ್ತಿದೆ' ಎಂದಿದ್ದಾರೆ.