ಪ್ರಣಬ್ ಮುಖರ್ಜಿ ಭಾರತ ರತ್ನ: ರಾಹುಲ್-ಸೋನಿಯಾ ಗೈರು
ನವದೆಹಲಿ, ಆಗಸ್ಟ್ 08: ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರಿಗೆ ಇಂದು ದೇಶದ ಪರಮೋಚ್ಛ ನಾಗರೀಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಯಿತು.
ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಣವ್ ಮುಖರ್ಜಿ ಸೇರಿ ಮೂವರಿಗೆ ಇಂದು ಭಾರತ ರತ್ನ ಪ್ರದಾನ
ಅಸ್ಸಾಂ ನ ಗಾಯನ ಬುಪೇನ್ ಹಜಾರಿಕಾ ಮತ್ತು ಸಾಮಾಜಿಕ ಹೋರಾಟಗಾರ ನಾಂಜಿ ದೇಶ್ಮುಖ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದ್ದು, ಅವರ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದರು.
ತಮ್ಮದೇ ಪಕ್ಷದ ಹಿರಿಯ ಪ್ರಣಬ್ ಮುಖರ್ಜಿ ಅವರು ದೇಶದ ಪರಮೋಚ್ಛ ಗೌರವ ಸ್ವೀಕರಿಸುವಾಗ ಕಾಂಗ್ರೆಸ್ನ ನಿಕಟ ಪುರ್ವ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಿರಿಯ ರಾಜಕಾರಣಿ ಎಲ್.ಕೆ.ಅಡ್ವಾಣಿ, ಗೃಹ ಮಂತ್ರಿ ಅಮಿತ್ ಶಾ, ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅವರುಗಳು ಉಪಸ್ಥಿತರಿದ್ದರು.
ಕಾಂಗ್ರೆಸ್ನಿಂದ ಅಧಿರ್ ರಂಜನ್ ಚೌದರಿ ಸೇರಿದಂತೆ ಇನ್ನೂ ಕೆಲವರು ಭಾಗವಿಸಿದ್ದರು. ರಾಹುಲ್ ಗಾಂಧಿ ಅವರು ಈ ಹಿಂದೆ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ದೊರೆತದ್ದಕ್ಕೆ ಶುಭ ಕೋರಿದ್ದರು. ಆದರೆ ಇಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.