ಕಾಂಗ್ರೆಸ್ಸಿಗರು ಸಂಸತ್ನಲ್ಲಿ ಚರ್ಚಿಸುವ ಬದಲು ಚಿಕನ್ ತಿನ್ನಲು ಬಂದಿದ್ದಾರಾ?: ಜೋಶಿ ಕಿಡಿ
ನವದೆಹಲಿ ಜುಲೈ 29: ಸಂಸತ್ತಿಗೆ ಕಾಂಗ್ರೆಸ್ ನಾಯಿಕರು ಚರ್ಚಿಸಲು ಬಂದಿದ್ದಾರಾ? ಅಥವಾ ಚಿಕನ್ ತಿನ್ನಲು ಬಂದಿದ್ದಾರಾ? ಎಂದು ಕಲಾಪದ ವೇಳೆ ಗಲಾಟೆ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆಗೆ ಕಾಂಗ್ರೆಸ್ ನಾಯಕ ಕುರಿತು ಮಾತನಾಡಿದ ಅವರು, ದೆಹಲಿಯ ಸಂಸತ್ತಿನ ಅಧಿವೇಶನವನ್ನು ಸುಗಮವಾಗಿ ನಡೆಸಲು ಬಿಡುತ್ತಿಲ್ಲ. ಕಲಾಪದಲ್ಲಿ ಯಾವ ಚರ್ಚೆಗಳಿಗೆ ಅವಕಾಶ ನೀಡದೇ ಗದ್ದಲ ಎಬ್ಬಿಸಿ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತಿರುವ ಕಾಂಗ್ರೆಸ್ ಸಂಸದರ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ಹೊರಹಾಕಿದರು.
ಅಧಿವೇಶನದಲ್ಲಿ ಅಭಿವೃದ್ಧಿ ಮತ್ತು ಸಮಸ್ಯೆಗಳು ಮೇಲೆ ಚರ್ಚೆಗೆ ಅವಕಾಶ ಕೊಡದ ಕಾಂಗ್ರೆಸ್ ಸಂಸದರು ಸಂಸತ್ತಿಗೆ ಬಂದಿರುವುದು ಏಕೆ? ಎಂಬುದನ್ನು ದೇಶದ ಜನರಿಗೆ ತಿಳಿಸಬೇಕು. ಇವರು ಸಂಸತ್ತಿನಲ್ಲಿ ಚರ್ಚೆ ನಡೆಸಲು ಬಂದಿದ್ದಾರೋ ಅಥವಾ ಗಾಂಧಿ ಪ್ರತಿಮೆ ಕೆಳಗೆ ಕುಳಿತು ಚಿಕನ್ ತಿನ್ನಲು ಬಂದಿದ್ದಾರೋ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಸಂಸತ್ತಿಗೆ ಬಂದ ಉದ್ದೇಶ ಏನೆಂಬುದನ್ನು ದೇಶದ ಜನರಿಗೆ ತಿಳಿಸಬೇಕು ಎಂದು ಅವರು ಪ್ರತಿಭಟನಾ ನಿರತ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಅಹಿಂಸಾವಾದಿ ಗಾಂಧಿ ಪ್ರತಿಮೆ ಬಳಿ ಮಾಂಸ ಸೇವನೆ
ಗಾಂಧಿಜಿಯವರು ಅಹಿಂಸೆಯಲ್ಲಿ ಅಚಲ ನಂಬಿಕೆಯುಳ್ಳ ಮಹಾತ್ಮರು. ಮಹಾತ್ಮ ಗಾಂಧೀಜಿಯವರ ಪ್ರತಿಮೆ ಕೆಳಗೆ ಕುಳಿತು ಕಾಂಗ್ರೆಸ್ ಸಂಸದರು ಕೋಳಿ ಮಾಂಸ ತಿನ್ನುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ದೇಶದ ಮಹಾನ್ ವ್ಯಕ್ತಿಗಳನ್ನು ಅವಮಾನಿಸುವುದು ಕಾಂಗ್ರೆಸ್ ಗೆ ಅಭ್ಯಾಸವಾಗಿದೆ ಎಂದು ಪ್ರಲ್ಹಾದ್ ಜೋಶಿ ಕೈ ಸಂಸದರ ವಿರುದ್ಧ ಹರಿಹಾಯ್ದರು.
ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆಯೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಕಾಂಗ್ರೆಸ್ನ ಅಧಿರ್ ರಂಜನ್ ಚೌಧರಿ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಷ್ಟ್ರಪತಿ ಬದಲು 'ರಾಷ್ಟ್ರಪತ್ನಿ' ಎಂದು ಅಧಿರ್ ರಂಜನ್ ಚೌಧರಿ ಅವರು ಹೇಳಿರುವುದು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ದೂರಿದರು.
ಕಾಂಗ್ರೆಸ್ ಈ ಮೂಲಕ ಆದಿವಾಸಿಗಳಿಗೆ ಅವಮಾನ ಮಾಡುತ್ತಿದೆ. ಈ ಬಗ್ಗೆ ಕ್ಷಮೆಯಾಚಿಸುವಂತೆ ಅಧೀರ್ ಅವರಿಗೆ ಕಾಂಗ್ರೆಸ್ ಹೇಳುವ ಬದಲು ಅವರ ಹೇಳಿಕೆಯನ್ನು ಕೈ ನಾಯಕರು ಬೆಂಬಲಿಸುತ್ತಿರುವಂತೆ ಕಾಣುತ್ತದೆ. ಸೋನಿಯಾ ಗಾಂಧಿ ಅವರೇ ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಪ್ರಲ್ಹಾದ್ ಜೋಶಿ ಈ ವೇಳೆ ಆಗ್ರಹಿಸಿದರು.
Recommended Video