ಗುಡಿಸಲು ವಾಸಿ ಸಂಸದನಿಗೆ ಎರಡೆರಡು ಸಚಿವ ಖಾತೆ ಕೊಟ್ಟ ಮೋದಿ
ನವದೆಹಲಿ, ಮೇ 31: ಈ ಬಾರಿ ಮೋದಿ ಸಂಪುಟದಲ್ಲಿ ಪ್ರಮುಖ ಆಕರ್ಷಣೆ ಪ್ರತಾಪ್ ಚಂದ್ರ ಸಾರಂಗಿ. ಗುಡಿಸಿಲಿನಲ್ಲಿ ವಾಸ ಮಾಡುತ್ತಾ, ಸೈಕಲ್ ಮೇಲೆ ಏರಿ ಚುನಾವಣೆ ಪ್ರಚಾರ ಮಾಡಿದ್ದಾತ ಚುನಾವಣೆ ಜಯಿಸಿದ್ದಲ್ಲದೆ ಈಗ ಮೋದಿ ಅವರ ಸಂಪುಟವನ್ನೂ ಸೇರಿದ್ದಾರೆ.
ಒಡಿಶಾದ ಬಾಲಾಸೋರ್ನಿಂದ ಸ್ಪರ್ಧಿಸಿದ್ದ ಸಾರಂಗಿ ಅವರು ತಮ್ಮ ಎದುರಾಳಿಯನ್ನು 12,956 ಮತಗಳ ಅಂತರದಿಂದ ಸೋಲಿಸಿದ್ದರು. ಸಾರಂಗಿ ಅವರು ಚುನಾವಣೆ ಗೆದ್ದಾಗಲೇ ಭಾರಿ ಜನಪ್ರಿಯತೆಗೆ ಪಾತ್ರರಾಗಿದ್ದರು. ಅವರ ಶ್ರಮವನ್ನು, ಸರಳ ಜೀವನವನ್ನು ಗಮನಿಸಿ ಇದೀಗ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ.
ಪಾಳು ಗುಡಿಸಲಿನ ಒಡೆಯ ಈಗ ಮೋದಿ ಸರ್ಕಾರದ ಸಚಿವ!
ಮೊದಲ ಬಾರಿಗೆ ಸಂಸತ್ಗೆ ಆಯ್ಕೆ ಆಗಿರುವ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಎರಡು ರಾಜ್ಯ ಖಾತೆಗಳು ದೊರೆತಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವ ಹಾಗೂ ಪಶುಸಂಗೋಪನೆ ಮತ್ತು ಹೈನುಗಾರಿಗೆ ಮತ್ತು ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.
ಈ ಸಂಸದರ ಒಟ್ಟು ಆಸ್ತಿ, ಒಂದು ಗುಡಿಸಲು, ಒಂದು ಸೈಕಲ್, ಒಂದು ಬ್ಯಾಗು!
ಒಡಿಶಾದ ಬೇರು ಮಟ್ಟದ ಕಾರ್ಯಕರ್ತ ಸಾರಂಗಿ
ಒಡಿಶಾದಲ್ಲಿ ಬಿಜೆಪಿಯ ಬೇರು ಮಟ್ಟದ ಕಾರ್ಯಕರ್ತರಾಗಿದ್ದ ಪ್ರತಾಪ್ ಚಂದ್ರ ಸಾರಂಗಿ ಅವರು ವರ್ಷಾನುಗಟ್ಟಲೆಯಿಂದ ಪಕ್ಷಕ್ಕಾಗಿ ದುಡಿದು, ಹಣವಿಲ್ಲದೆಯೂ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಈಗ ಮಂತ್ರಿಯೂ ಆಗಿರುವುದು ಪ್ರಜಾಪ್ರಭುತ್ವದ ಸುಂದರತೆಯನ್ನು ಜಗತ್ತಿಗೆ ಸಾರುತ್ತಿದೆ.
ಗಿರಿರಾಜ್ ಸಿಂಗ್ ಜೊತೆ ಕಾರ್ಯ ಹಂಚಿಕೆ
ಬಿಹಾರದ ಬಿಗುಸರಾಯ್ನಿಂದ ಗೆದ್ದಿರುವ ಗಿರಿರಾಜ್ ಸಿಂಗ್ ಅವರು ಪಶುಸಂಗೋಪನೆ, ಹೈನುಗಾರಿಕೆ ಮೀನುಗಾರಿಕೆಯ ಕ್ಯಾಬಿನೆಟ್ ಸಚಿವ ಸ್ಥಾನವನ್ನು ಹೊಂದಿದ್ದಾರೆ. ಪ್ರತಾಪ್ ಚಂದ್ರ ಸಾರಂಗಿ ಅವರು ಅವರ ಸಹಯೋಗದಲ್ಲಿ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಬೇಕಿದೆ.
ಈ ಹಿಂದೆಯೂ ಚುನಾವಣೆ ಗೆದ್ದಿದ್ದರು ಸಾರಂಗಿ
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ಸಂಪರ್ಕದಿಂದಾಗಿ ಅವರು ನೂರಾರು ಊರುಗಳಿಗೆ ತೆರಳಿ ದೇಶಸೇವೆಯ ಕಿಡಿ ಹೊತ್ತಿಸಿದರು. ನಂತರ ಬಿಜೆಪಿ ಸಂಪರ್ಕಕ್ಕೆ ಬಂದ ಅವರು 2004 ಮತ್ತು 2009ರಲ್ಲಿವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2004 ರಲ್ಲಿ ಬಾಲಸೋರ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಸೋತಿದ್ದರು. ಈ ಬಾರಿ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಸಾರಂಗಿ ಅವರ ಒಟ್ಟು ಆಸ್ತಿ ಎಷ್ಟು?
ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅವರು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ ಪ್ರಜಾರ ಅವರ ಒಟ್ಟು ಆಸ್ತಿ 13,46,236 ರೂ. ಒಟ್ಟು ಏಳು ಕ್ರಿಮಿನಲ್ ಕೇಸ್ ಗಳು ಅವರ ಮೇಲಿದೆ.