ಕೋವಿಡ್ ಔಷಧಿಗಳನ್ನು ಮರಳಿಸುವಂತೆ ಗೌತಮ್ ಗಂಭೀರ್ಗೆ ದೆಹಲಿ ಹೈಕೋರ್ಟ್ ಸೂಚನೆ
ನವದೆಹಲಿ, ಮೇ 17: ದಾಸ್ತಾನು ಮಾಡಿಕೊರಿವ ಕೋವಿಡ್ ಔಷಧಿಗಳನ್ನು ಮರಳಿಸುವಂತೆ ಗೌತಮ್ ಗಂಭೀರ್ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಈಗಾಗಲೇ ಕೋವಿಡ್ ಔಷಧಿಯ ಕೊರತೆ ಇದೆ, ಇಂತಹ ಸಂದರ್ಭದಲ್ಲಿ ಕೋವಿಡ್ ಔಷಧಿಗಳನ್ನು ದಾಸ್ತಾನು ಮಾಡಿರುವುದು ಸರಿಯಲ್ಲ, ಆದಷ್ಟು ಬೇಗ ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದಿರುಗಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಆ್ಯಂಟಿ ವೈರಸ್ ಔಷಧಿ ಸಂಗ್ರಹ: ಸಂಸದ ಗೌತಮ್ ಗಂಭೀರ್ ವಿರುದ್ಧ ದೂರು
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಘಾಯಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು, ಪ್ರಕರಣ ಕುರಿತಾಗಿ ದೆಹಲಿ ಪೊಲೀಸರು ಸಲ್ಲಿಸಿರುವ ವರದಿ ಬಗ್ಗೆ ನಿರಾಶೆ ವ್ಯಕ್ತಪಡಿಸಿದೆ.
ಹಾಗೆಯೇ ಸರಿಯಾದ ತನಿಖೆ ನಡೆಸಿ, ಉತ್ತಮ ವರದಿ ನೀಡುವಂತೆ ತಿಳಿಸಿದೆ. ಇದು ಸಾರ್ವಜನಿಕರಿಗಾಗಿ ಇರುವ ಔಷಧಿ, ಇದನ್ನು ರಾಜಕೀಯಕ್ಕೆ ಬಳಸಬಾರದು, ಬಡ ಹಾಗೂ ಅಗತ್ಯವಿರುವ ಜನರಿಗೆ ಉಪಯೋಗವಾಗುವಂತೆ ರಾಜಕೀಯ ನಾಯಕರು ತಮ್ಮ ಬಳಿ ದಾಸ್ತಾನು ಮಾಡಿರುವ ಕೋವಿಡ್ ಔಷಧಿಗಳನ್ನು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕರು ಮತ್ತು ದೆಹಲಿ ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಕೋವಿಡ್ ರೋಗಿಗಳ ಔಷಧವಿಲ್ಲದೆ ಸಾಯುತ್ತಿದ್ದಾರೆ, ಆದರೆ ದೆಹಲಿಯಲ್ಲಿ ನಾಯಕರು ದೊಡ್ಡ ಪ್ರಮಾಣದಲ್ಲಿ ಔಷಧಿಯನ್ನು ಶೇಖರಣೆ ಮಾಡುತ್ತಿದ್ದಾರೆ, ಮತ್ತು ವಿತರಣೆ ಮಾಡುತ್ತಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.
ಮೂಲಗಳ ಪ್ರಕಾರ ಗೌತಮ್ ಗಂಭೀರ್ ಅವರ ತಮ್ಮ ಕಚೇರಿಯಲ್ಲಿ ಆಂಟಿವೈರಲ್ ಔಷಧಿ ಫ್ಯಾಬಿಫ್ಲು ಅನ್ನು ಸಂಗ್ರಹಿಸಿ ವಿತರಿಸಿದ್ದಾರೆ ಎಂಬ ವರದಿಗಳ ಮೇರೆಗೆ ದೆಹಲಿ ಪೊಲೀಸರು ಪ್ರತಿಕ್ರಿಯೆ ಕೋರಿದ್ದಾರೆ.
ದೆಹಲಿಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಆಂಟಿವೈರಲ್ ಔಷಧಿ ಫ್ಯಾಬಿಫ್ಲುಗೆ ತೀವ್ರ ಕೊರತೆ ಇದ್ದು, ಇದರ ಅಕ್ರಮ ಸಂಗ್ರಹಣೆ ಅಥವಾ ದಾಸ್ತಾನಿನ ಕುರಿತು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇದೇ ಔಷಧಿಯ ವಿತರಣೆ ಮಾಡಿದ್ದ ಗಂಭೀರ್ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂಸದ ಗೌತಮ್ ಗಂಭೀರ್, 'ನಾವು ಎಲ್ಲಾ ವಿವರಗಳನ್ನು ಒದಗಿಸಿದ್ದೇವೆ. ನಾನು ದೆಹಲಿ ಹಾಗೂ ಅದರ ಜನರಿಗೆ ಯಾವಾಗಲೂ ನನ್ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಇದಕ್ಕೂ ಮೊದಲು ಶುಕ್ರವಾರ, ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ಕೋವಿಡ್ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದರು.
ಗೌತಮ್ ಗಂಭೀರ್ ಹಾಗೂ ಶ್ರೀನಿವಾಸ್ ಬಿ.ವಿ ಅವರಲ್ಲದೆ ದೆಹಲಿ ಪೊಲೀಸರು ಬಿಜೆಪಿ ವಕ್ತಾರ ಹರೀಶ್ ಖುರಾನಾ ಅವರನ್ನು ಕೋವಿಡ್-19 ಪರಿಹಾರ ಸಾಮಗ್ರಿಗಳ ವಿತರಣೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ.