ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ನಾಯಕರ ಪ್ರತಿಕ್ರಿಯೆ
ನವದೆಹಲಿ, ಸಪ್ಟೆಂಬರ್.30: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ ಘಟಾನುಘಟಿ ನಾಯಕರಿಗೆ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ. 28 ವರ್ಷಗಳ ಹಿಂದೆ ನಡೆದ ಘಟನೆ ಪೂರ್ವ ನಿಯೋಜಿತವಲ್ಲ ಎನ್ನುವ ಮೂಲಕ ಎಲ್ಲ 32 ಆರೋಪಿಗಳನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿದೆ.
1992ರಲ್ಲಿ ನಡೆದ ಬಾಬ್ರಿ ಮಸೀದಿ ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ನ್ಯಾಯಮೂರ್ತಿ ಎಸ್.ಕೆ. ಯಾದವ್ ಐತಿಹಾಸಿಕ ತೀರ್ಪು ನೀಡಿದ್ದಾರೆ. ಬಾಬ್ರಿ ಮಸೀದಿ ಧ್ವಂಸಕ್ಕೆ ಮೊದಲೇ ಸಂಚು ರೂಪಿಸಿರಲಿಲ್ಲ. ಅದೊಂದು ಪೂರ್ವ ನಿಯೋಜಿತ ಕೃತ್ಯವೂ ಆಗಿರಲಿಲ್ಲ. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷಿಗಳೂ ಇಲ್ಲ ಎಂದು ಕೋರ್ಟ್ ಹೇಳಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆ
ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಸತೀಶ್ ಪ್ರಧಾನ್ ಸೇರಿ 32 ಆರೋಪಿಗಳನ್ನು ನಿರ್ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದರು.
|
"ಸಿಬಿಐ ಕೋರ್ಟಿನ ತೀರ್ಪು ಬದ್ಧತೆಯ ಸಂಕೇತ"
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧ ಲಕ್ನೋ ಸಿಬಿಐ ಕೋರ್ಟ್ ನೀಡಿದ ತೀರ್ಪನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ. ಐತಿಹಾಸಿಕ ತೀರ್ಪು 1992ರಲ್ಲಿನ ರಾಮ ಜನ್ಮಭೂಮಿ ಚಳುವಳಿ, ನನ್ನ ವೈಯಕ್ತಿಕ ಹಾಗೂ ಬಿಜೆಪಿ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು ಎಲ್.ಕೆ. ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.
"ಬಾಬ್ರಿ ಮಸೀದಿ ಧ್ವಂಸಕ್ಕಾಗಿ ಯಾವುದೇ ಪಿತೂರಿ ನಡೆಸಿಲ್ಲ"
"ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು ಆಗಿದ್ದು, ಅಯೋಧ್ಯೆಯಲ್ಲಿ ಡಿಸೆಂಬರ್ 6ರಂದು ಘಟನೆ ಹಿಂದೆ ಯಾವುದೇ ಪಿತೂರಿ ನಡೆದಿರಲಿಲ್ಲ ಎಂದು ಸಾಬೀತಾಗಿದೆ. ನಮ್ಮ ಕಾರ್ಯಕ್ರಮ ಮತ್ತು ರ್ಯಾಲಿಗಳು ಯಾವುದೇ ಪಿತೂರಿಯ ಭಾಗವಾಗಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಕೋರ್ಟಿನ ತೀರ್ಪಿನಿಂದ ಸಂತೋಷವಾಗಿದ್ದು, ನಾವೀಗ ರಾಮ್ ಮಂದಿರ ನಿರ್ಮಾಣದ ಬಗ್ಗೆ ಉತ್ಸುಕರಾಗಬೇಕು" ಎಂದು ಮುರಳಿ ಮನೋಹರ್ ಜೋಶಿ ಹೇಳಿದ್ದಾರೆ
ಕಾಂಗ್ರೆಸ್ ದೂರುಗಳ ಹಿಂದೆ ರಾಜಕಾರಣ
"ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಸಾಧುಗಳನ್ನು, ವಿಹೆಚ್ ಪಿ ನಾಯಕರು ಮತ್ತು ಬಿಜೆಪಿ ವಿರುದ್ಧ ಉದ್ದೇಶಪೂರ್ವಕವಾಗಿ ದೂರುಗಳನ್ನು ದಾಖಲಿಸಿರುವುದು ತೀರ್ಪಿನಿಂದ ಸಾಬೀತಾಗಿದೆ. ರಾಜಕಾರಣಕ್ಕಾಗಿ ಕಾಂಗ್ರೆಸ್ ನಡೆಸಿದ ಪಿತೂರಿಗೆ ಕ್ಷಮಾಪಣೆ ಕೇಳಬೇಕು" ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ
ಮಸೀದಿ ಒಡೆಯುವವರನ್ನು ಬಿಜೆಪಿ ನಾಯಕರೇ ತಡೆದರು
1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಮತ್ತು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರು ಮಸೀದಿ ಒಡೆಯುವುದನ್ನು ತಡೆಯಲು ಪ್ರಯತ್ನಿಸಿದ್ದರು. ಮಸೀದಿ ಒಡೆಯುವವರನ್ನು ತಡೆಯಲು ಬಿಜೆಪಿ ಹಿರಿಯ ನಾಯಕರು ಪ್ರಯತ್ನಿಸಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.