ದೆಹಲಿ ಗಲಭೆ; ಸಾರ್ವಜನಿಕರಿಗೆ ದೆಹಲಿ ಪೊಲೀಸರಿಂದ ಸೂಚನೆ
ನವದೆಹಲಿ, ಜನವರಿ 29: ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ಉಂಟಾದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗೆ ಸೂಚನೆ ಹೊರಡಿಸಿದ್ದಾರೆ.
ದೆಹಲಿಯಲ್ಲಿ ಅಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ಯಾವುದೇ ಮಾಹಿತಿ ಇದ್ದರೂ ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನೀವು ಸಾಕ್ಷ್ಯವಾಗಿ ಮುಂದೆ ಬರುವುದಾದರೆ ನಿಮ್ಮ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ದೆಹಲಿ ಗಡಿ ಸಿಂಘುವಿನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ
"ಕೃಷಿ ಕಾಯ್ದೆಗಳ ವಿರುದ್ಧ ರೈತರು ಜನವರಿ 26ರಂದು ಟ್ರ್ಯಾಕ್ಟರ್ ಜಾಥಾ ನಡೆಸಿದ್ದರು. ರೈತರು ನಗರ ಪ್ರವೇಶಿಸುವ ಸಂದರ್ಭ ಗಲಭೆ ಸೃಷ್ಟಿಯಾಗಿದೆ. ಈ ಗಲಭೆ ಕುರಿತು ಕೆಲವು ಗೊಂದಲಗಳಿವೆ. ಹಿಂಸಾಚಾರಕ್ಕೆ ಪ್ರೇರೇಪಿಸಿದವರನ್ನು ಗುರುತು ಹಿಡಿಯಬೇಕಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಯಾವುದೇ ಮಾಹಿತಿ ಇದ್ದರೂ ನಮಗೆ ನೀಡಿ" ಎಂದು ದೆಹಲಿ ಪೊಲೀಸ್ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ ಮನವಿ ಮಾಡಿದ್ದಾರೆ.
ಈ ಗಲಭೆಗೆ ಸಾಕ್ಷಿಯಾದ ಸಾರ್ವಜನಿಕರು ಅಥವಾ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ಇದ್ದರೆ, ಮೊಬೈಲ್ ಅಥವಾ ಕ್ಯಾಮೆರಾದಲ್ಲಿ ಈ ಘಟನೆಯ ಚಿತ್ರೀಕರಣ ಮಾಡಿಕೊಂಡಿದ್ದರೆ ಅಂಥವರು ನಮಗೆ ನೀಡಿ. ನಿಮ್ಮ ಹೇಳಿಕೆ, ಫುಟೇಜ್, ಫೋಟೊಗಳನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ.