ರೈತರ ಭೇಟಿ: ಅರವಿಂದ್ ಕೇಜ್ರಿವಾಲ್ಗೆ ಗೃಹ ಬಂಧನ
ನವದೆಹಲಿ, ಡಿಸೆಂಬರ್ 08: ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಿದ್ದ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿದೆ.
ಕೃಷಿ ಕಾಯ್ದೆ ತಡೆಯುವ ಅವಕಾಶ ಕೈ ಚೆಲ್ಲಿದರಾ ಪಂಜಾಬ್ ಸಿಎಂ ಅಮರೀಂದರ್?
ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ ದಿಲ್ಲಿ ಗಡಿಗೆ ತೆರಳಿ ಪ್ರತಿಭಟನಾ ನಿರತ ರೈತ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದರು. ಹೀಗಾಗಿ ಅವರನ್ನು ಗೃಹ ಬಂಧನದಲ್ಲಿರುವುದಂತೆ ಪೊಲೀಸರು ತಿಳಿಸಿದ್ದು, ಯಾರನ್ನೂ ಭೇಟಿಯಾಗದಂತೆ ತಿಳಿಸಿದ್ದಾರೆ.
ಮಾತುಕತೆ ವೇಳೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದರು. ಅಷ್ಟೇ ಅಲ್ಲ, ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ಗೂ ಕೇಜ್ರಿವಾಲ್ ತಮ್ಮ ಬೆಂಬಲ ಸೂಚಿಸಿದರು. ಈ ಮೂಲಕ ಆಮ್ ಆದ್ಮಿ ಪಕ್ಷ ಸೇರಿದಂತೆ ಒಟ್ಟು 14 ವಿರೋಧ ಪಕ್ಷಗಳು ಭಾರತ್ ಬಂದ್ಗೆ ಬೆಂಬಲ ನೀಡಿದಂತಾಗಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಗಡಿಯ ಸಿಂಘು ಎಂಬಲ್ಲಿಗೆ ತೆರಳಿ ಅಲ್ಲಿ ಪ್ರತಿಭಟನೆ ಕುಳಿತಿರುವ ರೈತರೊಂದಿಗೆ ಮಾತುಕತೆ ನಡೆಸಿದರು. ಕೇಜ್ರಿವಾಲ್ ಜೊತೆಗೆ ಅವರ ಸಂಪುಟ ಸಚಿವರೂ ಉಪಸ್ಥಿತರಿದ್ದರು.