'ಪ್ರಧಾನಿ ಭಾರತದ ಘನತೆ ಹೆಚ್ಚಿಸುವ ಕಾರ್ಯ ಮಾಡುವಾಗ, ವಿಪಕ್ಷ ದೇಶಕ್ಕೆ ಕಳಂಕ ತರುತ್ತಿದೆ'
ನವದೆಹಲಿ, ನವೆಂಬರ್ 07: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಘನತೆ ಹೆಚ್ಚಿಸುವ ಕಾರ್ಯ ಮಾಡುತ್ತಿರುವಾಗ ವಿರೋಧ ಪಕ್ಷಗಳು ದೇಶಕ್ಕೆ ಕಳಂಕ ತರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರದ ಸಾಧನೆಗಳನ್ನು ಉಲ್ಲೇಖ ಮಾಡಿದ್ದಾರೆ. ಹಾಗೆಯೇ ವಿರೋಧ ಪಕ್ಷಗಳು ಭಾರತಕ್ಕೆ ಕಳಂಕ ತರುತ್ತಿದೆ ಎಂದು ದೂರಿದ್ದಾರೆ.
"ಕೊರೊನಾ ಲಸಿಕೆ ಅಭಿಯಾನದ ವಿಚಾರದಲ್ಲಿ ಭಾರತವನ್ನು ವಿಶ್ವದ ಎಲ್ಲಾ ದೇಶಗಳು ಹಾಡಿ ಹೊಗಳುತ್ತಿದೆ. ಆದರೆ ವಿರೋಧ ಪಕ್ಷಗಳು ಮಾತ್ರ ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಭಾರತದಲ್ಲಿ ಲಸಿಕೆ ನೀಡಲು ಆರಂಭ ಮಾಡಿದ ಸಂದರ್ಭದಿಂದಲೇ ಲಸಿಕೆಯ ಮೇಲೆ ಸಂದೇಹ ವ್ಯಕ್ತಪಡಿಸಿ, ಅದನ್ನು ಪ್ರಚಾರ ಮಾಡಿದೆ," ಎಂದು ನಿರ್ಮಲಾ ಸೀತಾರಾಮನ್ ಆರೋಪ ಮಾಡಿದ್ದಾರೆ.
ಸುಂಕ ಇಳಿಕೆಯಿಂದ ಇಂಧನ ಬಳಕೆ ಹೆಚ್ಚಳ ನಿರೀಕ್ಷೆ: ನಿರ್ಮಲಾ
"ನೂರು ಕೋಟಿಗೂ ಅಧಿಕ ಕೋವಿಡ್ ಲಸಿಕೆಯನ್ನು ನೀಡಿದ ಭಾರತದ ಕಾರ್ಯವು ವಿಶ್ವದಾದ್ಯಂತ ಪ್ರಶಂಸೆಗೆ ಒಳಗಾಗಿದೆ. ಕೋವಿಡ್ ಲಸಿಕೆ ಮತ್ತು ಒಟ್ಟಾರೆ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಬಜೆಟ್ನಲ್ಲಿ 36,000 ಕೋಟಿ ರೂಪಾಯಿಯನ್ನು ನಿಗದಿ ಮಾಡಲಾಗಿದೆ," ಎಂದು ಪ್ರಸ್ತಾಪ ಮಾಡಿದರು. "ರಕ್ಷಣೆ ಹಾಗೂ ಸೇನೆಗೆ ಮಹಿಳೆಯರ ಪ್ರವೇಶ ಮತ್ತು ಸೈನಿಕ ಶಾಲೆಗಳ ಸ್ಥಾಪನೆಯು ಮಹತ್ವದ ನಿರ್ಣಯಗಳು. ಮಹಿಳಾ ಅಭಿವೃದ್ಧಿಯೇ ನಮ್ಮ ಧ್ಯೇಯ," ಎಂದು ಕೂಡಾ ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ.
ಸಭೆಯಲ್ಲಿ ಪಕ್ಷದ ಹಲವಾರು ಮುಖಂಡರು ಲಸಿಕೆ ಸಂಖ್ಯೆಗಳು ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಉಚಿತ ಪಡಿತರ ವಿತರಣೆಯ ಬಗ್ಗೆ ಮಾತನಾಡಿದರು. "ನಾವು ಜನರ ಜೀವನದ ಅಮೂಲ್ಯತೆಗೆ ಆದ್ಯತೆ ನೀಡಿ 80 ಕೋಟಿ ಜನರಿಗೆ 8 ತಿಂಗಳ ಕಾಲ ಆಹಾರವನ್ನು ನೀಡಿದ್ದೇವೆ. 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಅಡಿಯಲ್ಲಿ ಈ ಆಹಾರವನ್ನು ನೀಡಲಾಗಿದೆ," ಎಂದು ಹೇಳಿದರು.
ಈ "ಒಂದು ರಾಷ್ಟ್ರ, ಒಂದು ಪಡಿತರ ಚೀಟಿ" ಯು ವಲಸೆ ಕಾರ್ಮಿಕರಿಗೆ ಅನ್ಯಯವಾಗುವ ಯೋಜನೆ ಆಗಿದೆ. ಈ ಯೋಜನೆಯು ವಲಸೆ ಕಾರ್ಮಿಕರು ತಮ್ಮ ಪಡಿತರ ಚೀಟಿಗಳನ್ನು ನೋಂದಾಯಿಸದ ಇತರ ರಾಜ್ಯಗಳಲ್ಲಿ ಅವರು ಕೆಲಸ ಮಾಡುವ ಸ್ಥಳದಲ್ಲಿ ಪಡಿತರವನ್ನು ಪಡೆಯಲು ಅವಕಾಶವನ್ನು ಮಾಡಿಕೊಡುತ್ತದೆ.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ದೆಹಲಿಯಲ್ಲಿ ಮಹತ್ವದ ಕಾರ್ಯಕಾರಣಿ ಆರಂಭ!
''ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಶಾಂತಿ ನೆಲೆಸಿದೆ"
ಇನ್ನು ಈ ಸಂದರ್ಭದಲ್ಲೇ "ಹಲವಾರು ತೊಂದರೆಗಳು ಇದ್ದರೂ ಕುಡಾ ಜಮ್ಮು ಮತ್ತು ಕಾಶ್ಮೀರ ಈಗ "ಭಯೋತ್ಪಾದನೆಯಿಂದ ಅಭಿವೃದ್ಧಿತ್ತ ಸಾಗುತ್ತಿದೆ," ಎಂದು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಟಿಕಲ್ 370 ರ ರದ್ಧತಿಯನ್ನು ಪ್ರಸ್ತಾಪಿಸಿದರು. "2004 ಮತ್ತು 2014 ರ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ 2,081 ಜನರು ಸಾವನ್ನಪ್ಪಿದ್ದರೆ, 2014 ರಿಂದ ಸೆಪ್ಟೆಂಬರ್ 2021 ರವರೆಗೆ ಕೇವಲ 239 ನಾಗರಿಕರು ಮಾತ್ರ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಶಾಂತಿ ನೆಲೆಸಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ," ಎಂದು ಕೂಡಾ ಸಚಿವೆ ಹೇಳಿದರು.
ಇನ್ನು ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ನಡೆದ ಹಿಂಸಾಚಾರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಖಂಡಿಸಿದರು. "ಹಿಂಸಾಚಾರದಲ್ಲಿ ಹಾನಿಗೆ ಒಳಗಾದ ಬಿಜೆಪಿ ಕಾರ್ಯಕರ್ತರ ಎಲ್ಲಾ ಕಾನೂನು ಪ್ರಕ್ರಿಯೆಯಲ್ಲಿ ಪಕ್ಷವು ಜೊತೆಯಾಗಿ, ಸಹಾಯವಾಗಿ ನಿಲ್ಲಲಿದೆ. ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರಿಗೆ ಪಕ್ಷವು ಬೆಂಬಲವಾಗಿ ಇರುತ್ತದೆ," ಎಂದು ಭರವಸೆ ನೀಡಿದರು.
(ಒನ್ಇಂಡಿಯಾ ಸುದ್ದಿ)