'ಬಿಜೆಪಿ ಕುಟುಂಬದ ಸುತ್ತ ಸುತ್ತುವ ಪಕ್ಷವಲ್ಲ': ಕಾಂಗ್ರೆಸ್ಗೆ ಮೋದಿ ಟಾಂಗ್
ನವದೆಹಲಿ, ನವೆಂಬರ್ 07: "ಬಿಜೆಪಿಯು ಕುಟುಂಬದ ಸುತ್ತ ಸುತ್ತುವ ಪಕ್ಷವಲ್ಲ" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ ಎಂದು ಬಿಜೆಪಿ ಪಕ್ಷದ ಹಿರಿಯನಾಯಕ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
"ಬಿಜೆಪಿ ಕಾರ್ಯಕರ್ತರು ಸಾಮಾನ್ಯ ಜನರು ಮತ್ತು ಪಕ್ಷದ ನಡುವೆ ನಂಬಿಕೆಯ ಸೇತುವೆಯಾಗಬೇಕು," ಎಂದು ತಿಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಂಚ ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಭರವಸೆಯನ್ನು ಕೂಡಾ ಇಂದಿನ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ದೆಹಲಿಯಲ್ಲಿ ಮಹತ್ವದ ಕಾರ್ಯಕಾರಣಿ ಆರಂಭ!
"ಬಿಜೆಪಿ ಈಗ ಕೇಂದ್ರ ಪಕ್ಷವಾಗಿದೆ. ಏಕೆಂದರೆ ಪಕ್ಷವು ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಿದೆ ಮತ್ತು ಬಿಜೆಪಿ ಕುಟುಂಬದ ಸುತ್ತ ಸುತ್ತುವ ಪಕ್ಷವಲ್ಲ," ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ನಡೆದಿದ್ದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ. ಇದೇ ಹಿನ್ನೆಲೆಯಲ್ಲಿ ಮುಂದಿನ ವರ್ಷ 5 ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸುವುದೂ ಸೇರಿದಂತೆ ಹಲವು ಅಜೆಂಡಾಗಳೊಂದಿಗೆ ದೆಹಲಿಯಲ್ಲಿ ಬಿಜೆಪಿಯ ಮಹತ್ವದ ರಾಷ್ಟ್ರೀಯ ಕಾರ್ಯಕಾರಣಿ ಆರಂಭವಾಗಿದೆ.
ಈ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಬಿಜೆಪಿ ಪಕ್ಷವು ಕುಟುಂಬದಿಂದ ನಡೆಯುತ್ತಿಲ್ಲ, ಬದಲಾಗಿ ಸಾರ್ವಜನಿಕ ಕಲ್ಯಾಣ ಸಂಸ್ಕೃತಿಯಿಂದ ಬಿಜೆಪಿ ನಡೆಯುತ್ತಿದೆ. ಪಕ್ಷವು ಸೇವಾ, ಸಂಕ್ಲಪ್ ಔರ್ ಸಂಪಾರಣ (ಸೇವೆ, ನಿರ್ಣಯ ಮತ್ತು ಬದ್ಧತೆ) ಮೌಲ್ಯಗಳ ಮೇಲೆ ನಿಂತಿದೆ," ಎಂದು ಉಲ್ಲೇಖ ಮಾಡಿದರು.
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ಅಧ್ಯಕ್ಷರು ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಪ್ರಸ್ತಾವವನ್ನು ಮಾಡಿದ್ದಾರೆ. ಪಂಜಾಬ್ನ ಬಿಜೆಪಿ ಕೂಡಾ ಇಲ್ಲಿನ ಚುನಾವಣಾ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದೆ ಎಂದು ಬಿಜೆಪಿ ಪಕ್ಷದ ಹಿರಿಯನಾಯಕ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
'ಪ್ರಧಾನಿ ಭಾರತದ ಘನತೆ ಹೆಚ್ಚಿಸುವ ಕಾರ್ಯ ಮಾಡುವಾಗ, ವಿಪಕ್ಷ ದೇಶಕ್ಕೆ ಕಳಂಕ ತರುತ್ತಿದೆ'
"ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಭಾಷಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ಪ್ರಮುಖ ಮಂತ್ರವನ್ನು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸಾಮಾನ್ಯ ಜನರು ಮತ್ತು ಪಕ್ಷದ ನಡುವೆ ನಂಬಿಕೆಯ ಸೇತುವೆಯಾಗಬೇಕು ಎಂದು ತಿಳಿಸಿದ್ದಾರೆ. ಇನ್ನು ಪಕ್ಷದ ಇತಿಹಾಸವನ್ನು ಉಲ್ಲೇಖ ಮಾಡುವ ಸಂದರ್ಭದಲ್ಲಿ ಪಕ್ಷವು ಯಾವಾಗಲೂ ನಿಕಟ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿದೆ ಎಂದಿದ್ದಾರೆ," ಎಂದು ಬಿಜೆಪಿ ಪಕ್ಷದ ಹಿರಿಯನಾಯಕ ಭೂಪೇಂದ್ರ ಯಾದವ್ ತಿಳಿಸಿದರು.
ಮುಂದಿನ ವರ್ಷದ ಚುನಾವಣೆಯ ಬಗ್ಗೆ ಸಭೆಯಲ್ಲಿ ಚರ್ಚೆ
ಇನ್ನು ಇಂದು ನಡೆದ ಮಹತ್ವದ ಸಭೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಪಕ್ಷ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರವಾಗಿ ಅಧ್ಯಯನ ಮಾಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಎಂಬ ಐದು ರಾಜ್ಯಗಳಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ 2022 ರ ಕೊನೆಯಲ್ಲಿ ಚುನಾವಣೆಗಳು ನಡೆಯಲಿವೆ. ಪಂಜಾಬ್ ಹೊರತುಪಡಿಸಿ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಉಳಿಸುಕೊಳ್ಳುವ ನಿಟ್ಟಿನಲ್ಲಿ ಹಾಗೂ ಪಂಜಾಬ್ನಲ್ಲಿ ಕಾಂಗ್ರೆಸ್ ತೆಕ್ಕೆಯಿಂದ ಅಧಿಕಾರವನ್ನು ತನ್ನ ಕೈಗೆ ಪಡೆಯುವ ನಿಟ್ಟಿನಲ್ಲಿ ಬಿಜೆಪಿಯು ಈಗಾಗಲೇ ಸಭೆಗಳನ್ನು ನಡೆಸುತ್ತಿದೆ. ಅದರ ಭಾಗವಾಗಿ ಇಂದು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆಗಿದೆ.
(ಒನ್ಇಂಡಿಯಾ ಸುದ್ದಿ)