Breaking: ಪಿಎಂ ಭದ್ರತಾ ವೈಫಲ್ಯ, ಎಲ್ಲಾ ತನಿಖೆ ನಿಲ್ಲಿಸುವಂತೆ ಸುಪ್ರೀಂ ಸೂಚನೆ
ನವದೆಹಲಿ, ಜನವರಿ 10: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಎಲ್ಲಾ ತನಿಖೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದ್ಇಯ ಸಮಿತಿ ರಚಿಸಿದೆ, ಅದರಲ್ಲಿ ಚಂಡೀಗಢ ಡಿಜಿಪಿ, ಎನ್ಐಎ ಐಜಿ, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಹಾಗೂ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಿರಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ.
ಭದ್ರತಾ ಲೋಪದ ಕುರಿತು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕೋರಿ ʼಲಾಯರ್ಸ್ ವಾಯ್ಸ್ʼ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿರುವ ಪೀಠದಲ್ಲಿ ನಡೆಯಿತು.
ಪಂಜಾಬ್ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಡಿ ಎಸ್ ಪಟ್ವಾಲಿಯಾ ಅವರು, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ಪ್ರಧಾನಿಯವರ ಪ್ರಯಾಣದ ವಿವರಗಳನ್ನು ಅಧಿಕೃತವಾಗಿ ಪರಿಗಣಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅಲ್ಲದೆ ಯಾವುದೇ ವಿಚಾರಣೆ ನಡೆಸದೆ ರಾಜ್ಯದ ಪೊಲೀಸ್ ಹಾಗೂ ಇತರ ಅಧಿಕಾರಿಗಳಿಗೆ ಏಳು ಶೋಕಾಸ್ ನೋಟಿಸ್ಗಳನ್ನು ನೀಡಲಾಗಿದೆ. ತನಿಖೆ ಸ್ಥಗಿತಗೊಂಡಿರುವಾಗ ಈ ಶೋಕಾಸ್ ನೋಟಿಸ್ ಎಲ್ಲಿಂದ ಬಂತು? ಕೇಂದ್ರ ಸರ್ಕಾರದ ಸಮಿತಿಯಿಂದ ನ್ಯಾಯ ದೊರೆಯುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ನ್ಯಾಯಯುತ ತನಿಖೆಗೆ ಒಳಗಾಗುತ್ತಾರೆ ಎಂದು ಅನ್ನಿಸುವುದಿಲ್ಲ ಎಂದ ಪಟ್ವಾಲಿಯಾ, ಸ್ವತಂತ್ರ ತನಿಖೆಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ "ಪ್ರತಿಭಟನಾ ಪ್ರದೇಶದಿಂದ 100 ಮೀ ದೂರದಲ್ಲಿರುವ ಸ್ಥಳಕ್ಕೆ ಪ್ರಧಾನಿ ಬೆಂಗಾವಲು ಪಡೆ ತಲುಪಿದೆ. (ಪ್ರಧಾನಿ ಭಧ್ರತೆಯ ಹೊಣೆ ಹೊತ್ತ) ಎಸ್ಪಿಜಿಯ ಬ್ಲೂಬುಕ್ ಪ್ರಕಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು (ಎಸ್ಪಿಜಿ) ಅಧಿಕಾರಿಗಳ ಜವಾಬ್ದಾರಿಯಾಗಿದ್ದು ಕಡಿಮೆ ಅನಾನುಕೂಲತೆ ಇರುವ ರೀತಿಯಲ್ಲಿ ಅದಿಕಾರಿಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕಿತ್ತು.
ಮೇಲ್ಸೇತುವೆಯ ಬಳಿ ಜನಸಂದಣಿ ಇದೆ ಎಂಬ ಬಗ್ಗೆ ಬೆಂಗಾವಲು ಪಡೆಗೆ ಯಾವುದೇ ಸೂಚನೆ ದೊರೆತಿರಲಿಲ್ಲ ಇದು ʼಸಂಪೂರ್ಣ ಗುಪ್ತಚರ ವೈಫಲ್ಯʼ. ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸುತ್ತಿದೆ ಎಂಬುದು ಗಂಭೀರ ವಿಚಾರ. ಈ ಹಿನ್ನೆಲೆಯಲ್ಲಿ ಎಲ್ಲಿ ಲೋಪ ನಡೆದಿದೆ ಎಂಬುದನ್ನು ಕೇಂದ್ರ ಸರ್ಕಾರದ ಸಮಿತಿ ಪರಿಶೀಲಿಸಬೇಕಿದೆ ಎಂದರು.
ಕೇಂದ್ರ ಸತ್ಯಶೋಧನೆ ನಡೆಸುವ ಅಗತ್ಯವಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. "ಶೋಕಾಸ್ ನೋಟಿಸ್ ನೀಡಿ ಆ ಮೂಲಕ ಹೇಗೆ ಮುಂದುವರೆಯಬೇಕು ಎಂಬ ಬಗ್ಗೆ ನೀವು ನಿರ್ಧಾರ ಕೈಗೊಂಡಿದ್ದೀರಿ. ಹಾಗಿದ್ದಾಗ ನ್ಯಾಯಾಲಯ ಏಕೆ ವಿಚಾರಣೆ ನಡೆಸಬೇಕು?" ಎಂದು ಟೀಕಿಸಿತು.
ಇದಕ್ಕೆ ದನಿಗೂಡಿಸಿದ ನ್ಯಾ. ಸೂರ್ಯಕಾಂತ್ "ನಿಮ್ಮ ಶೋಕಾಸ್ ನೋಟಿಸ್ ಸ್ವಯಂ-ವಿರೋಧಾಭಾಸದಿಂದ ಕೂಡಿದೆ. ಸಮಿತಿ ರಚಿಸುವ ಮೂಲಕ, ನೀವು ಎಸ್ಪಿಜಿ ಕಾಯಿದೆಯ ಉಲ್ಲಂಘನೆಯಾಗಿದೆಯೇ ಎಂದು ತನಿಖೆ ಮಾಡಲು ಬಯಸುತ್ತೀರಿ. ಬಳಿಕ ರಾಜ್ಯ ಮುಖ್ಯ ಕಾರ್ಯದರ್ಶಿ (ಸಿಎಸ್) ಮತ್ತು ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿ) ತಪ್ಪಿತಸ್ಥರೆಂದು ಪರಿಗಣಿಸುತ್ತೀರಿ. ಅವರನ್ನು ತಪ್ಪಿತಸ್ಥರು ಎಂದು ತೀರ್ಮಾನಿಸಿದ್ದು ಯಾರು?" ಎಂದು ಕೇಳಿದರು.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕೈಗೊಂಡ ಭದ್ರತಾ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿತ್ತು.
Recommended Video
'ಲಾಯರ್ಸ್ ವಾಯ್ಸ್' ಎಂಬ ಸಂಘಟನೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.
ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠವು ಪ್ರಧಾನಿ ಭೇಟಿಯ ವೇಳೆಯಲ್ಲಾದ ಭದ್ರತಾ ಲೋಪದ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ತಪ್ಪು ಮಾಡಿದ ಪಂಜಾಬ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.
ಪ್ರಧಾನಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಕೈಗೊಂಡ ಭದ್ರತಾ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪ್ರತ್ಯೇಕವಾಗಿ ರಚಿಸಿರುವ ವಿಚಾರಣಾ ಸಮಿತಿಗಳಿಗೆ ಮುಂದಿನ ವಿಚಾರಣೆವರೆಗೆ ತನಿಖೆ ಮುಂದುವರಿಸದಂತೆ ಸೂಚನೆ ನೀಡಿತ್ತು.
ಪ್ರಧಾನಿ ಮೋದಿಯವರು ಜನವರಿ 5ರಂದು ಪಂಜಾಬ್ ರಾಜ್ಯದಲ್ಲಿ ಓಡಾಡಿದ ಎಲ್ಲಾ ಸ್ಥಳಗಳ ದಾಖಲೆ ಮತ್ತು ಪ್ರಧಾನಿ ಓಡಾಡಲು ಇದ್ದ ಸೌಕರ್ಯಗಳ ದಾಖಲೆಗಳನ್ನು ಸಂಗ್ರಹಿಸುವಂತೆ ಪಂಜಾಬ್ ಹೈಕೋರ್ಟ್ನ ಉನ್ನತ ಅಧಿಕಾರಿಯೊಬ್ಬರಿಗೆ ಸೂಚನೆ ಸಹ ನೀಡಿದೆ.
ಮೋದಿ ಬರುವ ಕುರಿತು ಪಂಜಾಬ್ ಸರ್ಕಾರಕ್ಕೆ ಮೊದಲೇ ತಿಳಿಸಲಾಗಿತ್ತು. ಆದರೂ ಈ ರೀತಿ ಘಟನೆ ನಡೆದಿದೆ, ಈ ಕುರಿತು ಗೃಹ ಸಚಿವಾಲಯ ಪಂಜಾಬ್ ಸರ್ಕಾರದ ಬಳಿ ವರದಿ ಕೇಳಿದೆ.ಹವಾಮಾನ ಸ್ಥಿತಿ ಸುಧಾರಿಸದ ಕಾರಣ, ಅವರು ರಸ್ತೆ ಮೂಲಕವೇ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು, ಅದಕ್ಕೆ ಸುಮಾರು 2 ಗಂಟೆಗೂ ಅಧಿಕ ಸಮಯ ಹಿಡಿಯುತ್ತಿತ್ತು.ಪಂಜಾಬ್ ಪೊಲೀಸ್ ಡಿಜಿಪಿ ಅವರಿಂದ ಅಗತ್ಯ ಭದ್ರತಾ ಏರ್ಪಾಡುಗಳನ್ನು ಖಾತ್ರಿಪಡಿಸಿಕೊಂಡ ನಂತರ ಅವರು ರಸ್ತೆ ಮೂಲಕ ಪ್ರಯಾಣ ಆರಂಭಿಸಿದರು.
ಆದರೆ ಹುಸ್ಸೈನಿವಾಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಸುಮಾರು 30 ಕಿಲೋಮೀಟರ್ ದೂರ ಇದೆ ಎನ್ನುವಾಗ ಪ್ರಧಾನಮಂತ್ರಿಗಳ ಬೆಂಗಾವಲು ವಾಹನ ಮೇಲುಸೇತುವೆ ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ಅಡ್ಡಗಟ್ಟಿದ್ದು ( ಬ್ಲಾಕ್ ಮಾಡಿದ್ದು) ಕಂಡು ಬಂದಿತು.
ಪ್ರಧಾನಮಂತ್ರಿ ಸುಮಾರು 15-20 ನಿಮಿಷಗಳ ಕಾಲ ಮೇಲುಸೇತುವೆಯ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ಪ್ರಧಾನಮಂತ್ರಿಯವರ ವೇಳಾಪಟ್ಟಿ ಮತ್ತು ಪ್ರಯಾಣ ಯೋಜನೆಯನ್ನು ಮುಂಚಿತವಾಗಿಯೇ ಪಂಜಾಬ್ ಸರ್ಕಾರಕ್ಕೆ ತಿಳಿಸಲಾಗಿತ್ತು. ನಿಗದಿಯಂತೆ, ಅವರು ಪ್ರಯಾಣಕ್ಕೆ,ಭದ್ರತೆಗೆ ಅಗತ್ಯ ಏರ್ಪಾಡುಗಳನ್ನು ಮಾಡಬೇಕಿತ್ತು ಮತ್ತು ಸಂಕಷ್ಟ ಯೋಜನೆಯನ್ನೂ ಸಹ ಸಿದ್ಧಪಡಿಸಿಕೊಳ್ಳಬೇಕಿತ್ತು.
ಸಂಕಷ್ಟ ಯೋಜನೆಯ ದೃಷ್ಟಿಯಿಂದ ಪಂಜಾಬ್ ಸರ್ಕಾರ ರಸ್ತೆ ಮೂಲಕ ಸುರಕ್ಷಿತ ಸಂಚಾರಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು, ಆದರೆ ಆ ರೀತಿ ನಿಯೋಜನೆ ಮಾಡದಿದ್ದುದು ಸ್ಪಷ್ಟವಾಗಿ ಕಂಡುಬಂದಿತು.