ಕೊರೊನಾ ಆತಂಕ; ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
ನವದೆಹಲಿ, ಮಾರ್ಚ್ 18: ದೇಶದಲ್ಲಿ ತೀವ್ರ ಆತಂಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಸೋಂಕು (ಕೋವಿಡ್ 19) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್19 ರ ಗುರುವಾರ ರಾತ್ರಿ 8 ಗಂಟೆಗೆ ಕೊರೊನಾ ವೈರಸ್ ಸೋಂಕು ಬಗ್ಗೆ ಮಹತ್ವದ ಮಾತುಗಳನ್ನು ದೇಶ ವಾಸಿಗಳ ಜೊತೆಗೆ ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಜ್ವಾಲಾಮುಖಿ, ಉಲ್ಕೆಗಳಿಂದಲೂ ವಿನಾಶಕಾರಿ ವೈರಸ್ಗಳು ಭೂಮಿಗೆ ಬರುತ್ತವೆ!
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ತಗುಲಿತ್ತಿರುವವರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿರುವುದರಿಂದ ಭಾರತ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದ್ದು. ರಾಜ್ಯಗಳಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ಆದೇಶಿಸಿದೆ. ಅಲ್ಲದೇ ಯುರೋಪಿಯನ್ ಯೂನಿಯನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರನ್ನು ಮಾರ್ಚ್ 31 ರವೆರೆಗೆ ದೇಶದೊಳಗೆ ಬಿಡದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಭಾರತದಲ್ಲಿ ಬುಧವಾರದ ಅಂತ್ಯಕ್ಕೆ ಒಟ್ಟು 160 ಜನಕ್ಕೆ ಕೊರೊನಾ ವೈರಸ್ ಸೋಂಕು (ಕೋವಿಡ್ 19) ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ವಿಷಯವನ್ನು ದೃಢಪಡಿಸಿದೆ. ಬುಧವಾರ ಒಂದೇ ದಿನಕ್ಕೆ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 12 ಜನ ಹೊಸ ಸೋಂಕಿತರು ಕಂಡು ಬಂದಿದ್ದಾರೆ. 160 ರಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟ ಕರ್ನಾಟಕ, ಮಹಾರಾಷ್ಟ್ರ ಹಾಗೂ ದೆಹಲಿಯ ತಲಾ ಒಬ್ಬರು ಹಾಗೂ 25 ಜನ ವಿದೇಶಿಗರೂ ಸೇರಿದ್ದಾರೆ. ಸೋಂಕಿತರ ಸಂಪರ್ಕದಲ್ಲಿ 5700 ಜನ ಇದ್ದರು. ಅವರೆಲ್ಲರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಮಹಾರಾಷ್ಟ್ರ (47) ಹಾಗೂ ಕೇರಳದಲ್ಲಿ (27) ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇಂದ್ರ ಸರ್ಕಾರ ಎಲ್ಲ ಕೇಂದ್ರಿಯ ಶಾಲಾ ಕಾಲೇಜು ಪರೀಕ್ಷೆಗಳನ್ನು ಮುಂದಕ್ಕೆ ಹಾಕುವಂತೆ ಮಂಡಳಿಗಳಿಗೆ ಆದೇಶಿಸಿದೆ.