ರೈತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ: ಪ್ರಧಾನಿ ಮೋದಿ ಆರೋಪ
ನವದೆಹಲಿ, ಸೆಪ್ಟೆಂಬರ್ 18: ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಅನುಮೋದನೆ ನೀಡಿರುವುದು ಭಾರತದ ಕೃಷಿ ವಲಯಕ್ಕೆ ಮಹತ್ವದ ನಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಎರಡು ಮಸೂದೆಗಳನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ಈ ಮಸೂದೆಗಳು ರೈತರಿಗೆ ಹೊಸ ಅವಕಾಶಗಳನ್ನು ಒದಗಿಸುವ ಮೂಲಕ ಸುಧಾರಣೆಗೆ ದಾರಿ ಮಾಡಿಕೊಡಲಿದೆ ಎಂದರು.
'ಅನೇಕ ಶಕ್ತಿಗಳು ರೈತರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿವೆ. ಎಂಎಸ್ಪಿ ಮತ್ತು ಸರ್ಕಾರದಿಂದ ಬೆಳೆ ಖರೀದಿ ಸೇರಿದಂತೆ ಎಲ್ಲ ಯೋಜನೆಗಳೂ ಇತರೆ ಹೊಸ ಆಯ್ಕೆಗಳ ಜತೆ ಮುಂದುವರಿಯಲಿದೆ' ಎಂದು ಮೋದಿ ಭರವಸೆ ನೀಡಿದರು.
'ಕೃಷಿ ಸುಧಾರಣೆಯ ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಿರುವುದು ಕೃಷಿ ವಲಯಕ್ಕೆ ಮಹತ್ವದ ನಡೆಯಾಗಿದೆ. ಇವು ಮಧ್ಯವರ್ತಿಗಳು ಹಾಗೂ ಇತರೆ ಸಂಕಷ್ಟಗಳಿಂದ ರೈತರಿಗೆ ಮುಕ್ತಿ ನೀಡಲಿವೆ. ಈ ಕೃಷಿ ವಲಯಗಳು ರೈತರಿಗೆ ಹೊಸ ಅವಕಾಶಗಳನ್ನು ಒದಗಿಸಲಿದ್ದು, ಅವರ ಲಾಭ ಹೆಚ್ಚಳಕ್ಕೆ ಅನುಕೂಲ ಮಾಡಿಕೊಡಲಿದೆ' ಎಂದು ಮೋದಿ ತಿಳಿಸಿದರು.
ಲೋಕಸಭೆಯಲ್ಲಿ ಗುರುವಾರ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ 2020 ಹಾಗೂ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020ಗಳಿಗೆ ಗುರುವಾರ ಅನುಮೋದನೆ ದೊರಕಿದೆ. ಈ ಎರಡೂ ಮಸೂದೆಗಳ ಯಾವುದೇ ವರ್ಗಕ್ಕೆ ಸಂಬಂಧಿಸಿದಂತೆ ಮತಕ್ಕೆ ಹಾಕುವಂತೆ ವಿರೋಧಪಕ್ಷಗಳು ಕೇಳದಿರುವುದರಿಂದ ಮಸೂದೆಗಳನ್ನು ಅಂಗೀಕರಿಸಲಾಯಿತು. ಈ ಎರಡೂ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್, ಡಿಎಂಕೆ ಮತ್ತು ಎಡಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿ ಹೊರನಡೆದವು.