ಪ್ರಣವ್ ಮುಖರ್ಜಿ ಮಹಾನ್ ಮುತ್ಸದ್ಧಿ: ಮಾಜಿ ರಾಷ್ಟ್ರಪತಿ ಅಗಲಿಕೆಗೆ ಪ್ರಧಾನಿ ಮೋದಿ ಶೋಕ
ನವದೆಹಲಿ, ಆಗಸ್ಟ್ 31: ಆರೋಗ್ಯ ಸಮಸ್ಯೆಗಳಿಂದಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೋಮವಾರ ಕೊನೆಯುಸಿರೆಳೆದರು. ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
Recommended Video
ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. 'ಭಾರತ ರತ್ನ ಶ್ರೀ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಭಾರತ ದುಃಖಿಸುತ್ತಿದೆ. ಅವರು ನಮ್ಮ ದೇಶದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿ ಹೋಗಿದ್ದಾರೆ' ಎಂದು ಪ್ರಧಾನಿ ಸ್ಮರಿಸಿದ್ದಾರೆ.
ಪ್ರಣಬ್ ಕಳೆದುಕೊಂಡು ಅನಾಥಪ್ರಜ್ಞೆ ಆವರಿಸಿದೆ; ಬಿಎಸ್ವೈ ಸಂತಾಪ
'ಒಬ್ಬ ಶ್ರೇಷ್ಠ ವಿದ್ವಾಂಸ, ಒಬ್ಬ ಮಹಾನ್ ಮುತ್ಸದ್ಧಿ, ಇಡೀ ರಾಜಕೀಯ ವ್ಯವಸ್ಥೆ ಮತ್ತು ಸಮಾಜದ ಎಲ್ಲ ವರ್ಗಗಳೂ ಅವರನ್ನು ಮೆಚ್ಚಿಕೊಂಡಿದ್ದವು' ಎಂದು ಮೋದಿ ತಮ್ಮ ಸಂತಾಪ ಸಂದೇಶದ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಹಲವು ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಪ್ರಣವ್ ಮುಖರ್ಜಿ ಅವರು ಮಹತ್ವದ ಆರ್ಥಿಕ ಮತ್ತು ರಕ್ಷಣಾ ಸಚಿವಾಲಯಗಳಿಗೆ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವ ಕೊಡುಗೆಗಳನ್ನು ನೀಡಿದ್ದಾರೆ. ಅವರೊಬ್ಬ ಅದ್ಭುತ ಸಂಸದೀಯ ಪಟು. ಸದಾ ಚೆನ್ನಾಗಿ ತಯಾರಿ ಮಾಡಿಕೊಂಡಿರುತ್ತಿದ್ದ, ಅಪ್ರತಿಮವಾಗಿ ಅಭಿವ್ಯಕ್ತಗೊಳಿಸುತ್ತಿದ್ದ ಜತೆಗೆ ತಮಾಷೆಯ ವ್ಯಕ್ತಿತ್ವದವರು.
Profile: ಕಾಳಿ ದೇವಿ ಉಪಾಸಕ, ಕಾಂಗ್ರೆಸ್ ಕಟ್ಟಾಳು ಪ್ರಣಬ್ ದಾದಾ
ಭಾರತದ ರಾಷ್ಟ್ರಪತಿಯಾಗಿ ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿ ಭವನವು ಜನಸಾಮಾನ್ಯರಿಗೆ ಮತ್ತಷ್ಟು ಸುಲಭ ಪ್ರವೇಶಕ್ಕೆ ಸಿಗುವಂತೆ ಮಾಡಿದರು. ಅವರು ರಾಷ್ಟ್ರಪತಿ ಭವನವನ್ನು ಕಲಿಕೆಯ, ಆವಿಷ್ಕಾರದ, ಸಂಸ್ಕೃತಿ, ವಿಜ್ಞಾನ ಮತ್ತು ಸಾಹಿತ್ಯದ ಕೇಂದ್ರವನ್ನಾಗಿಸಿದರು. ಪ್ರಮುಖ ನೀತಿ ವಿಷಯಗಳಲ್ಲಿನ ಅವರ ವಿವೇಕಯುತ ಸಲಹೆಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
2014ರಲ್ಲಿ ನನಗೆ ನವದೆಹಲಿ ಹೊಸತು. ಮೊದಲ ದಿನದಿಂದಲೂ ಪ್ರಣವ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದದ ಹಾರೈಕೆ ಸಿಕ್ಕಿತು. ಅವರೊಂದಿಗಿನ ಸಮಾಲೋಚನೆಗಳನ್ನು ಎಂದಿಗೂ ನೆನೆಸಿಕೊಳ್ಳುತ್ತೇನೆ. ಅವರ ಕುಟುಂಬ, ಸ್ನೇಹಿತರು, ಅನುಯಾಯಿಗಳು ಮತ್ತು ಭಾರತದೆಲ್ಲಡೆಗಿನ ಬೆಂಬಲಿಗರಿಗೆ ನನ್ನ ಸಂತಾಪಗಳು ಎಂದು ಮೋದಿ ಹೇಳಿದ್ದಾರೆ.