ಪ್ರಧಾನಿ ಮೋದಿ ದಿಢೀರ್ ಲಡಾಖ್ ಭೇಟಿ ಕುರಿತು ಚೀನಾ ಹೇಳಿದ್ದೇನು?
ನವದೆಹಲಿ, ಜುಲೈ 3: ಪ್ರಧಾನಿ ನರೇಂದ್ರ ಮೋದಿ ಲಡಾಖ್ ಭೇಟಿ ಮಾಡಿ ಭಾರತೀಯ ಸೈನಿಕರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಇದೇ ವೇಳೆ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಕಾಲ್ಕೆರೆದು ನಿಂತ ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಿದ್ದಾರೆ. ವಿಶ್ವವು ವಿಕಾಸವಾದದತ್ತ ಸಾಗಬೇಕೇ ವಿನಃ ವಿಸ್ತಾರವಾದದತ್ತ ಅಲ್ಲ ಎನ್ನುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
Recommended Video
ಲಡಾಖ್ ನ ನಿಮ್ಮೂ ಸೆಕ್ಟರ್ ಗೆ ಇಂದು ದಿಢೀರ್ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಅಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಯೋಧರ ಶೌರ್ಯ ಮತ್ತು ತಾಕತ್ತು ಪ್ರಶಂಸಿದ ಮೋದಿ, ನಿಮ್ಮ ಶೌರ್ಯ ಮತ್ತು ಸಾಹಸ ಇದೀಗ ಇಡೀ ವಿಶ್ವಕ್ಕೇ ಭಾರತದ ತಾಕತ್ತಿನ ಪರಿಚಯ ಮಾಡಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ. ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೇಳಿದರು.
ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ
ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು.
ಪ್ರಧಾನಿ ನರೇಂದ್ರ ಮೋದಿ ಲಡಾಖ್ ದಿಢೀರ್ ಭೇಟಿ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯ ''ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಈಗಿರುವ ತಾಪಮಾನವನ್ನು ಕಡಿಮೆ ಮಾಡುವ ಬಗ್ಗೆ ಸಂವಹನ ಮತ್ತು ಮಾತುಕತೆ ನಡೆಸುತ್ತಿವೆ. ಈ ಸಮಯದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮದಲ್ಲಿ ಯಾವುದೇ ಪಕ್ಷವು ತೊಡಗಬಾರದು'' ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯವರ ಲಡಾಖ್ ಭೇಟಿ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.