ಬಸವ ಜಯಂತಿ: 'ಕಾಯಕವೇ ಕೈಲಾಸ' ಎಂದ ಪ್ರಧಾನಿ ಮೋದಿ
ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಾಹಿತಿ ದಿವಂಗತ ಎಂಎಂ ಕಲಬುರ್ಗಿ ಸಂಪಾದಿಸಿದ ವಚನ ಸಂಪುಟವನ್ನೂ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು. ದೇಶದ ಬೇರೆ ಬೇರೆ ಭಾಷೆಗಳ 200 ತಜ್ಞರು ಭಾರತದ ಇತರ 22 ಭಾಷೆಗಳಿಗೆ ಇದನ್ನು ಅನುವಾದಿಸಿದ್ದಾರೆ.
ನವ ದೆಹಲಿ, ಏಪ್ರಿಲ್ 29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಸವ ಜಯಂತಿಯ ಶುಭ ಸಂದರ್ಭದಲ್ಲಿ 'ಅಂತರಾಷ್ಟ್ರೀಯ ಬಸವ ಸಮಾವೇಶ' ಉದ್ಘಾಟಿಸಿದರು. ದೆಹಲಿಯ ವಿಜ್ಞಾನ ಭವನದಲ್ಲಿ ಈ ವರ್ಣರಂಜಿತ ಕಾರ್ಯಕ್ರಮ ನಡೆಯಿತು.
ಕಾಯಕಯೋಗಿ ಬಸವಣ್ಣನವರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಹೂವಿನ ಹಾರ ಹಾಕಿ ನಮಿಸಿದರು. ಉಳಿದ ಗಣ್ಯರು ಇದೇ ಸಂದರ್ಭದಲ್ಲಿ ಪುಷ್ಪನಮನ ಸಲ್ಲಿಸಿದರು. ನಂತರ 'ಓಂ ಶ್ರೀ ಬಸವ ಲಿಂಗಾಯ ನಮಃ' ಎನ್ನುವ ಮೂಲಕ ಬಸವ ನಾಮ ಸ್ಮರಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ಭಾಷಣದುದ್ದಕ್ಕೂ ಬಸವಣ್ಣನವರ ನಿಲುವುಗಳು, ಕಾರ್ಯಗಳನ್ನು ಪ್ರಧಾನಿಗಳು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿಗಳು ಭಾರತದ 23 ಭಾಷೆಗಳಲ್ಲಿ ಹೊರ ತಂದಿರುವ ವಚನ ಸಂಪುಟವನ್ನೂ ಬಿಡುಗಡೆಗೊಳಿಸಿದರು. ಇದರಲ್ಲಿ ಬಸವಣ್ಣನವರ ವಚನಗಳೂ ಸೇರಿದಂತೆ ಹಲವರ ವಚನಗಳಿವೆ. ರಾಷ್ಟ್ರ ಮಟ್ಟದಲ್ಲಿ ಮೊದಲ ಬಾರಿಗೆ ಬಸವಣ್ಣನವರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಡಿಜಿಟಲ್ ರೂಪದಲ್ಲಿಯೂ ಈ ಹೊತ್ತಗೆಗಳನ್ನು ಬಿಡುಗಡೆ ಮಾಡಿದ್ದಾರೆ.
ನಾಡಿನ ಹೆಸರಾಂತ ಸಾಹಿತಿ ದಿವಂಗತ ಎಂಎಂ ಕಲಬುರ್ಗಿ ಈ ವಚನ ಸಂಪುಟವನ್ನು ಸಂಪಾದಿಸಿದ್ದಾರೆ. ಜತೆಗೆ ದೇಶದ ಬೇರೆ ಬೇರೆ ಭಾಷೆಗಳ 200 ತಜ್ಞರು ಭಾರತದ ಇತರ 22 ಭಾಷೆಗಳಿಗೆ ಇದನ್ನು ಅನುವಾದಿಸಿದ್ದಾರೆ. ಬಸವ ಸಮಿತಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪುಸ್ತಕ ಹೊರ ತಂದಿದೆ. ಇದಕ್ಕಾಗಿ ಕರ್ನಾಟಕ ಸರಕಾರವೂ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಇವಲ್ಲದರ ಜತೆಗೆ ಇದು 'ಬಸವ ಸಮಿತಿ'ಯ ಸುವರ್ಣ ಮಹೋತ್ಸವವೂ ಹೌದು. 1964ರಲ್ಲಿ ಬಸವಣ್ಣನ ತತ್ವಗಳನ್ನು ದೇಶದೆಲ್ಲೆಡೆ ಹರಡಲು ಭಾರತದ ಮಾಜಿ ರಾಷ್ಟ್ರಪತಿ ಬಿಡಿ ಜತ್ತಿ ಈ ಬಸವ ಸಮಿತಿಯನ್ನು ರಚಿಸಿದ್ದರು.
ದೆಹಲಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಬಸವ ಸಮಾವೇಶದಲ್ಲಿ ಕರ್ನಾಟಕದಿಂದ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಡಿವಿ ಸದಾನಂದ ಗೌಡ ಕೂಡಾ ಪಾಲ್ಗೊಂಡಿದ್ದಾರೆ.